ADVERTISEMENT

ಜಲಮೂಲ ರಕ್ಷಣೆ ಎಲ್ಲರ ಹೊಣೆ

ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ; ಜಿಲ್ಲಾ ನ್ಯಾಯಾಧೀಶ ವಿ.ಶ್ರೀಶಾನಂದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:28 IST
Last Updated 31 ಜನವರಿ 2017, 5:28 IST
ಜಲಮೂಲ ರಕ್ಷಣೆ ಎಲ್ಲರ ಹೊಣೆ
ಜಲಮೂಲ ರಕ್ಷಣೆ ಎಲ್ಲರ ಹೊಣೆ   

ಧಾರವಾಡ: ‘ಜಲ ಮೂಲಗಳಾದ ಬಾವಿ, ಕೆರೆ, ನದಿ, ಕೊಳ್ಳಗಳನ್ನು ಸ್ವಚ್ಛ­ವಾಗಿಟ್ಟುಕೊಳ್ಳುವ ಮೂಲಕ  ಜಲಚರ­ಗಳನ್ನು ಸಂರಕ್ಷಿಸುವ ಹೊಣೆ ಪ್ರತಿ­ಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಜಿಲ್ಲಾ ನ್ಯಾಯಾಧೀಶ ವಿ.ಶ್ರೀಶಾನಂದ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹುಬ್ಬಳ್ಳಿ-–ಧಾರವಾಡ ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ವಕೀಲರ ಸಂಘ, ಹುಬ್ಬಳ್ಳಿ- ಧಾರವಾಡ ನಾಗರಿಕ ಪರಿಸರ ಸಮಿತಿ, ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಘಟಕ, ಧಾರವಾಡ ರೌಂಡ್ ಟೇಬಲ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಇಲ್ಲಿನ ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾವಿ, ಕೆರೆ, ನದಿ, ಜಲಮೂಲ­ಗಳನ್ನು ದೇವರ ಸಮಾನವಾಗಿ ನೋಡು­ವುದು ನಮ್ಮ ದೇಶದಲ್ಲಿ ಪಾರಂಪರಿ­ಕವಾಗಿ ನಡೆದು ಬಂದಿದೆ. ಅಂತಹ ಸ್ಥಳಗಳನ್ನು ಪಾವಿತ್ರ್ಯತೆ ಕಾಪಾಡಬೇಕು. ಜಲಮೂಲಗಳಿಗೆ ಅಶುದ್ದ ಕಾರ್ಖಾನೆ ನೀರು, ಕೊಳಚೆ ನೀರು ಬಿಟ್ಟು ಮಲಿನ­ಗೊಳಿಸಬಾರದು. ಪ್ಲಾಸ್ಟಿಕ್ ಪದಾರ್ಥ­ಗಳನ್ನು ಜಲಕ್ಕೆ ಸೇರಿಸಬಾರದು ಎಂದರು.
 
ಪಾಲಿಕೆ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ‘ಮಹಾತ್ಮಾ ಗಾಂಧೀಜಿಯರ  69ನೇ ಪುಣ್ಯ ತಿಥಿ ಅಂಗವಾಗಿ  ರಾಷ್ಟ್ರ ಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಾತ್ಮಾ ಗಾಂಧೀಜಿ ಅವರ ತತ್ವಾದರ್ಶಗಳನ್ನು ಇಂದಿನ ಯುವ ಜನಾಂಗ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ನ್ಯಾಯಾಧೀಶರಾದ ಎಸ್‌.ಎಸ್‌.ಬಳ್ಳೊಳ್ಳಿ, ಎಸ್‌.ಎನ್‌.ಹೆಗಡೆ, ಬಲರಾಮ ಕುಸುಗಲ್, ಬಿ.ಎಸ್.ಸಂಗಟಿ, ಪರಿಸರ ಅಧಿಕಾರಿ ವಿಜಯಕುಮಾರ ಕಡಕಭಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಶಂಕರ ಕುಂಬಿ, ಎಲ್.ಟಿ.ನಾಯ್ಕ,  ಬಿ.ಡಿ.ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.