ADVERTISEMENT

ತಗ್ಗು, ಗುಂಡಿಗಳಲ್ಲಿ ರಸ್ತೆ ಹುಡುಕಿದ ಡಿ.ಸಿ.!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 7:03 IST
Last Updated 22 ಆಗಸ್ಟ್ 2014, 7:03 IST

ಧಾರವಾಡ: ಕಳೆದ ಹಲವು ದಿನಗಳ ಹಿಂದೆ ನಗರದಲ್ಲಿ ಬಿಟ್ಟೂ ಬಿಡದೇ ಸುರಿದ ಮಳೆಯಿಂದಾಗಿ ಉಂಟಾದ ರಸ್ತೆಗಳ ದುಃಸ್ಥಿತಿಯನ್ನು ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್‌ ಅವರು ಗುರುವಾರ ವೀಕ್ಷಣೆ ಮಾಡಿದರು.

ನಗರದ ಭಾಗಶಃ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡೆ ತಡೆ ಉಂಟು ಮಾಡುತ್ತಿವೆ. ಇತ್ತೀಚೆಗಷ್ಟೇ ಮಳೆ ಬಿಟ್ಟೂ ಬಿಡದೇ ಸುರಿದಿದ್ದರಿಂದ ನಗರದ ಹಲವು ಕಡೆಗಳಲ್ಲಿ ರಸ್ತೆ ತುಂಬೆಲ್ಲ ಬರೀ ತಗ್ಗು ಗುಂಡಿಗಳೇ ಗೋಚರಿಸುತ್ತಿವೆ. ಸದ್ಯ ಮಳೆ ಸ್ವಲ್ಪ ಬಿಡುವು ಕೊಟ್ಟಿದ್ದರಿಂದ ದೂಳು ತನ್ನ ಆಟ ಮುಂದುವರೆಸಿದೆ.

ಗುರುವಾರ ಜಿಲ್ಲಾಧಿಕಾರಿ ಚೋಳನ್‌ ಅವರು, ವಾರ್ಡ್‌ ನಂಬರ್‌ 1, 13, 14,15, 17 ಹಾಗೂ 18 ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಯ ದು:ಸ್ಥಿತಿ ಯನ್ನು ವೀಕ್ಷಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ‘ಅವಳಿ ನಗರಗದ ಮುಖ್ಯ ರಸ್ತೆಗಳಲ್ಲಿ ಗುರುತಿಸಲಾಗಿರುವ ತಗ್ಗು, ಗುಂಡಿಗಳನ್ನು ಇನ್ನು ಹತ್ತು ದಿನಗಳೊಳಗಾಗಿ ಮುಚ್ಚಲಾಗುವುದು. ಶಾಸಕರ ಸೂಚನೆಯಂತೆ ಹತ್ತು ದಿನಗಳಲ್ಲಿ ಅವಳಿನಗರದ ಮುಖ್ಯ ರಸ್ತೆಯಲ್ಲಿರುವ ಸುಮಾರು 85 ಗುಂಡಿಗಳನ್ನು ಸದ್ಯ ಮುಚ್ಚಲಾಗು ವುದು. ಉಳಿದವುಗಳನ್ನು ಪಾಲಿಕೆ ಅನುದಾನ ಬಂದ ನಂತರ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.

ಬುಧ ವಾರ ರಸ್ತೆ ಕಾಮಗಾರಿಗಳ ಕುರಿತು ಸಭೆ ನಡೆಸಲಾಗಿದ್ದು, ಪಿಡಬ್ಲುಡಿ, ಯುಜಿಡಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳನ್ನು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಸ್ತೆ ರಿಪೇರಿಗಾರಿ ಸರ್ಕಾರದಿಂದ ಒಟ್ಟು ₨ ೧೧೦ ಕೋಟಿ  ಅನುದಾನ ಬಂದಿದೆ. ರಸ್ತೆಗಳ ಅಭಿವೃ ದ್ಧಿಗೆ ಸಾಕಷ್ಟು ಅನುದಾನ ಇದೆ. ಆದ್ದರಿಂದ ಶೀಘ್ರದಲ್ಲಿಯೇ ರಸ್ತೆಗಳ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾ ಗುವುದು’ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

‘ಹೊಸಯಲ್ಲಾಪುರ ರುಧ್ರಭೂಮಿ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಬೇಕೆಂಬ ಬೇಡಿಕೆ ಇದ್ದು, ಅದನ್ನು ಶೀಘ್ರದಲ್ಲಿಯೇ ಕಾಂಕ್ರೀಟ್ ರಸ್ತೆ ಮಾಡಲಾಗುವುದು. ಅಲ್ಲದೇ ಚರಂಡಿ ವ್ಯವಸ್ಥೆಯನ್ನೂ ಸಹ ಅಲ್ಲಿ ಕಲ್ಪಿಸಲಾಗುವುದು. ರುದ್ರಭೂಮಿಯ ಹತ್ತಿರ ಇರುವ ತ್ಯಾಜ್ಯ ವಿಲೇವಾರಿ ಕುರಿತು ಟೆಂಡರ್ ನೀಡುವುದು ಬಾಕಿ ಉಳಿದಿದ್ದು, ಸೆ. ೧೫ರ ಒಳಗಾಗಿ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಶಾಸಕರ ಸಭೆ ಕರೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತ ನಾಡಿ, ‘ನಗರದ ವಾರ್ಡ್‌ ನಂಬರ್‌ 1, 18 ಹಾಗೂ 39ರಲ್ಲಿ ರಸ್ತೆ ಸಮಸ್ಯೆ ಜಾಸ್ತಿ ಇದ್ದು, ಅಲ್ಲಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಗಮನಿಸಿ ದ್ದಾರೆ. ಸದ್ಯ ತಾತ್ಕಾಲಿಕವಾಗಿ ಗುಂಡಿ ಗಳನ್ನು ಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ನವೆಂಬರ್‌ ತಿಂಗಳಲ್ಲಿ ಸಂಪೂರ್ಣ ರಸ್ತೆಗಳ ದುರಸ್ತಿ ನಡೆಯಲಿದೆ. ಕೆಲವೊಂದಿಷ್ಟು ಒಳಚ ರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ಮನೆಗಳಿಗೆ ನುಗ್ಗುತ್ತಿದೆ. ಈ ಸಮಸ್ಯೆಯನ್ನೂ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ನಗರದ ವಿವಿಧ ರಸ್ತೆಗಳನ್ನು ಪಾಲಿಕೆ ಅಧಿಕಾರಿಗಳೊಂದಿಗೆ ವೀಕ್ಷಿಸಿದ ಜಿಲ್ಲಾಧಿಕಾರಿಗಳು ಹೊಸಯಲ್ಲಾಪುರದ ಸ್ಮಶಾನಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಅರವಿಂದ ಬೆಲ್ಲದ, ಮೇಯರ್‌ ಶಿವು ಹಿರೇಮಠ ಸೇರಿದಂತೆ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.