ಧಾರವಾಡ: ‘ತಲಾಖ್ ಕುರಿತಂತೆ ಧರ್ಮಗ್ರಂಥ ಕುರಾನ್ನಲ್ಲಿ ಸ್ಪಷ್ಟ ನಿಯಮಗಳಿವೆ. ಸೃಷ್ಟಿಕರ್ತನಿಂದ ರಚನೆಯಾದ ಕಾನೂನನ್ನು ನಾವು ಪಾಲನೆ ಮಾಡುತ್ತಿದ್ದೇವೆ’ ಎಂದು ಜಮಾತೆ ಇಸ್ಲಾಂ ಹಿಂದ್ ಸಂಘಟನೆ ಸದಸ್ಯ ಅಕ್ಬರ್ ಅಲಿ ಉಡುಪಿ ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಜಮಾತೆ ಇಸ್ಲಾಂ ವತಿಯಿಂದ ಮುಸ್ಲಿಂ ವೈಯಕ್ತಿಕ ಕಾನೂನು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಲಾಖ್ ಕಾನೂನನ್ನು ಕಾಲ ಕಾಲಕ್ಕೆ ಬದಲಾವಣೆ ಮಾಡುವ ಅಗತ್ಯವಿಲ್ಲ. ಬದಲಾವಣೆಯನ್ನೂ ಮುಸ್ಲಿಂ ಸಮುದಾಯ ಒಪ್ಪುವುದಿಲ್ಲ’ ಎಂದರು. ‘ಕುರಾನಿನ ಶಿಕ್ಷಣದ ಕೊರತೆ ನಮ್ಮಲ್ಲಿ ಇರುವ ಕಾರಣಕ್ಕಾಗಿ ಇಸ್ಲಾಂ ಧರ್ಮಕ್ಕೆ ಕೆಸರೆರೆಚುವ ಮತ್ತು ಅದರಿಂದ ಹೆದರಿಕೆ ಹುಟ್ಟಿಸುವ ಕೆಲಸ ನಡೆಯುತ್ತಿದೆ.‘ಇಸ್ಲಾಂನಲ್ಲಿ ನಾಲ್ಕು ಮದುವೆ ಆಗಲು ಅನುಮತಿ ಇದೆ. ಆದರೆ, ಅದಕ್ಕೂ ಸಹ ಕೆಲ ನಿಯಮಗಳು ಇವೆ. ಅದರ ಪ್ರಕಾರ ಮಾಡಲಾಗುತ್ತಿದೆ. ಕಾನೂನಿನ ಬಗ್ಗೆ ಸಮರ್ಪಕ ಮಾಹಿತಿ ಹೊಂದಿರಬೇಕು. ಅಲ್ಲದೆ ಬುರ್ಖಾ ಎಂದರೆ ಸ್ವಾತಂತ್ರ್ಯ ಕಳೆದುಕೊಳ್ಳುವ ವಿಷಯ ಎನ್ನುತ್ತಾರೆ. ಅದು ನಿಜವಲ್ಲ. ಬದಲಿಗೆ ಅದು ಅವರ ರಕ್ಷಣೆಗಾಗಿ ಇದೆ. ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ’ ಎಂದು ಅವರು ಹೇಳಿದರು.
‘ಪುರುಷನಿಗೆ ಸಮಾನವಾಗಿ ಮಹಿಳೆಯರನ್ನು ದುಡಿಯಲು ಕಳುಹಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕಾರಣ ಅದು ದುಡಿಸುವುದಲ್ಲ. ಬದಲಿಗೆ ದಂಡಿಸುವುದಾಗಿದೆ. ಮಹಿಳೆಗೆ ಇಸ್ಲಾಂನಲ್ಲಿ ಹಲವಾರು ಜವಾಬ್ದಾರಿಗಳನ್ನು ನೀಡಿದೆ. ಅದರ ಪ್ರಕಾರ ಅವುಗಳನ್ನು ನಿಭಾಯಿಸಲು ತಿಳಿಸಲಾಗಿದೆ’ ಎಂದರು. ಜಮಾತೆ ಇಸ್ಲಾಂ ಹಿಂದ್ನ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.