ADVERTISEMENT

ಮನೆಗಳಿಗೆ ಮಣ್ಣು ಮಿಶ್ರಿತ ನೀರು ಪೂರೈಕೆ; ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಮೇ 2017, 9:11 IST
Last Updated 14 ಮೇ 2017, 9:11 IST
ಮನೆಗಳಿಗೆ ಮಣ್ಣು ಮಿಶ್ರಿತ ನೀರು ಪೂರೈಕೆ; ಆಕ್ರೋಶ
ಮನೆಗಳಿಗೆ ಮಣ್ಣು ಮಿಶ್ರಿತ ನೀರು ಪೂರೈಕೆ; ಆಕ್ರೋಶ   

ಹುಬ್ಬಳ್ಳಿ: ಕಳೆದ ಒಂದು ವಾರದಿಂದ ಇಲ್ಲಿನ ಶಿರೂರು ಪಾರ್ಕ್‌ನ ರಾಮಕೃಷ್ಣ ಹೌಸಿಂಗ್‌ ಸೊಸೈಟಿ ಬಡಾವಣೆಯ ನಿವಾಸಿಗಳಿಗೆ ನೀರು ಪೂರೈಕೆ ಮಾಡದ ಜಲಮಂಡಳಿಯು ಶನಿವಾರ ಮಣ್ಣು ಮಿಶ್ರಿತ ನೀರನ್ನು ಸರಬರಾಜು ಮಾಡಿತು.

ಇದರಿಂದ ಸಿಟ್ಟಿಗೆದ್ದ ನಿವಾಸಿಗಳು ಪಾಲಿಕೆ ಸದಸ್ಯ ಮಹೇಶ ಬುರ್ಲಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್‌ ಶಿವಶಂಕರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಲಮಂಡಳಿಯು ಈ ಬಡಾವಣೆಗಳಲ್ಲಿ ಹೊಸ ಪೈಪ್‌ಲೈನ್‌ಗಳನ್ನು ಜೋಡಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ನೆಲ ಅಗೆದಿದ್ದರಿಂದ ಹಳೆ ಪೈಪ್‌ಲೈನ್‌ಗಳು ಒಡೆದು ಮಣ್ಣು ಮಿಶ್ರಿತ ನೀರು ಮನೆಗಳನ್ನು ಸೇರುತ್ತಿತ್ತು.

ADVERTISEMENT

ಶುಕ್ರವಾರ ರಾತ್ರಿ ಕೊಳಚೆ ನೀರು ಪೂರೈಕೆಯಾಗಿದ್ದು, ಉತ್ತಮ ಗುಣಮಟ್ಟದ ನೀರನ್ನು ಮತ್ತೆ ಬಿಡಬೇಕು ಎಂದು ನಿವಾಸಿಗಳು ಒತ್ತಾಯಿಸಿದರು. ಸೋಮವಾರ ಹಾಗೂ ಮಂಗಳವಾರ ನೀರು ಪೂರೈಸುವುದಾಗಿ ಜಲಮಂಡಳಿ ಅಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ ಬುರ್ಲಿ, ‘ಎರಡು ಬಾರಿ ನೀರು ಬಿಡುವುದರೊಳಗಾಗಿ ಸಮಸ್ಯೆಗೆ ಕಾರಣ ಗೊತ್ತಾಗದಿದ್ದರೆ ಹೊಸ ಲೈನ್‌ ಬದಲು ಹಳೆಯ ಸಂಪರ್ಕದ ಮೂಲಕವೇ ನೀರು ಪೂರೈಸಲು ಕ್ರಮ ಕೈಗೊಳ್ಳುವುದಾಗಿ’ ಭರವಸೆ ನೀಡಿದರು.ನಂತರ ಕೆಲವರು ಖಾಸಗಿ ಟ್ಯಾಂಕರ್‌ ಮೂಲಕ ನೀರು ತರಿಸಿಕೊಂಡರೆ, ಕೆಲ ಮನೆಗಳಿಗೆ ಜಲಮಂಡಳಿಯವರೇ ನೀರು ಪೂರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.