ADVERTISEMENT

ರೀಗಲ್‌ ವೃತ್ತ ವಿಸ್ತರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:23 IST
Last Updated 6 ನವೆಂಬರ್ 2017, 6:23 IST

ಧಾರವಾಡ: ಟಿ‍ಪ್ಪು ಜಯಂತಿ ಅಂಗವಾಗಿ ಪಾಲಿಕೆ ಅನುಮತಿ ಪಡೆಯದೇ ನಗರದ ರೀಗಲ್ ಸರ್ಕಲ್ (ಟಿಪ್ಪು ವೃತ್ತ)ನಲ್ಲಿ ರಸ್ತೆ ಅಗೆದು ಕಟ್ಟೆ ನಿರ್ಮಾಣ ಮಾಡಲು ಮುಂದಾಗಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಶಿವಾಜಿ ವೃತ್ತದಲ್ಲಿ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಕೆಲ ವ್ಯಕ್ತಿಗಳು ಇಲ್ಲಿನ ರೀಗಲ್ ವೃತ್ತವನ್ನು ವಿಸ್ತರಣೆ ಮಾಡಿ ಟಿಪ್ಪು ವೃತ್ತವೆಂದು ಪುನರ್ ನಾಮಕರಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡೊದಿಲ್ಲ. ಕಾಂಗ್ರೆಸ್ ಸರ್ಕಾರದ ಈ ತೀರ್ಮಾನವನ್ನು ಬಿಜೆಪಿ ವಿರೋಧಿಸುತ್ತದೆ’ ಎಂದರು.

‘ಈ ಕುರಿತು ಪಾಲಿಕೆ ಹಾಗೂ ಪೊಲೀಸ್‌ ಆಯುಕ್ತರಲ್ಲಿ ವಿಚಾರಿಸಿದ್ದೇನೆ. ರೀಗಲ್ ವೃತ್ತಕ್ಕೆ ಟಿಪ್ಪು ವೃತ್ತವೆಂದು ನಾಮಕರಣ ಮಾಡುವ ಕುರಿತು ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ದಿಢೀರನೆ ಇಂತಹ ತೀರ್ಮಾನ ಕೈಗೊಳ್ಳುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

‘ಶಾಂತಿ ಪ್ರಿಯ ನಗರ ಧಾರವಾಡ ಇತ್ತೀಚೆಗೆ ಗಲಭೆಯ ಊರಾಗಿದೆ. ಇಂತಹ ಚಟುವಟಿಕೆಗಲಿಂದ ಮತ್ತಷ್ಟು ಸಂಘರ್ಷಗಳು ಉಂಟಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಈ ತೀರ್ಮಾನವನ್ನು ಕೂಡಲೇ ಕೈ ಬಿಡಬೇಕು’ ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಸಂಜಯ್‌ ಕಪಟಕರ, ಶಂಕರ ಶೆಳಕೆ, ಬಸವರಾಜ ಮುತ್ತಳ್ಳಿ, ಶರಣು ಅಂಗಡಿ, ಅರವಿಂದ ಏಗನಗೌಡರ, ರಾಕೇಶ ನಾಜರೇ, ಪ್ರಮೋದ ಕಾರಕೂನ, ರಾಜು ಕೋಟೆನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.