ADVERTISEMENT

ಸಾಮೂಹಿಕ ವಿವಾಹ ಬಡವರ ಬಾಳಿಗೆ ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 23 ಮೇ 2017, 8:53 IST
Last Updated 23 ಮೇ 2017, 8:53 IST

ಕುಂದಗೋಳ: ‘ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಬಡವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಮಹತ್ವಾಕಾಂಕ್ಷಿ ಯೋಜನೆ ಅಂದರೆ ಈ ಸಾಮೂಹಿಕ ವಿವಾಹ. ಇದು ಬಡವರ ಪಾಲಿಗೆ ಆಶಾಕಿರಣ’ ಎಂದು ಧಾರವಾಡ ಮುರಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಗೋವಿಂದಪ್ಪ ಜುಟ್ಟಲ್ ಪ್ರತಿಷ್ಠಾನ ಸಮಿತಿ, ಜನಸೇವಾ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 43 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಪ್ರತಿಷ್ಠಾನದ ಮುಖ್ಯಸ್ಥ ಚಂದ್ರಶೇಖರ ಜುಟ್ಟಲ್ ಯಾವುದೇ ಅಧಿಕಾರ ಇಲ್ಲದಿದ್ದರೂ ಸಾಮೂಹಿಕ ವಿವಾಹಗಳ ಜೊತೆಗೆ ಬಡವರ ಕಷ್ಟಕಾರ್ಪಣ್ಯಗಳಲ್ಲಿ ಹಗಲಿರಳು ಶ್ರಮಿಸಿ, ಸಮಾಜಸೇವೆ ಮಾಡಿದರು. 10 ವರ್ಷದಿಂದ ಪ್ರತಿ ವರ್ಷ ಉಚಿತವಾಗಿ ವಿವಾಹ ಸಮಾರಂಭವನ್ನು ಹಮ್ಮಿಕೊಳ್ಳುತ್ತಿರುವ ಗೋವಿಂದಪ್ಪ ಜುಟ್ಟಲ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.

ADVERTISEMENT

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ‘ಸತಿ ಪತಿಗಳಾದ ನವ ದಂಪತಿಗಳು ಚಿಕ್ಕ ಸಂಸಾರದೊಂದಿಗೆ ಚೊಕ್ಕ ಸಂಸಾರದಲ್ಲಿ ಅತ್ತೆ ಮಾವಂದಿರನ್ನು ತಂದೆ ತಾಯಿಯಂತೆ ಗೌರವಿಸಿ. ತವರು ಮನೆಗೂ ಹಾಗೂ ಗಂಡನ ಮನೆಗೆ ಕೀರ್ತಿ ತನ್ನಿ’ ಎಂದರು.

ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮಾತನಾಡಿ, ‘ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ್ ಅವರ ಆಡಳಿತದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸ್ಮರಿಸಿಕೊಂಡು ತಂದೆಯ ಮಾರ್ಗದರ್ಶನದಂತೆ ಮಕ್ಕಳು ಸಮಾಜದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉತ್ತಮ ಸ್ಥಾನಮಾನ ಸಿಗಲಿ’ ಎಂದು ಹಾರೈಸಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಸಮಾಜ ಸೇವಕ ಹಜರತಲಿ ಜೋಡಮನಿ, ಗುರುನಗೌಡ ಪಾಟೀಲ ಅತ್ತಿಗೇರಿ, ಮಹದೇವ ದೊಡಮನಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರನ್ನು ಸನ್ಮಾನಿಸಲಾಯಿತು.

ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ, ಕಲ್ಯಾಪೂರ ಬಸವಣ್ಣಜ್ಜನವರು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಾರದಮ್ಮ ಜುಟ್ಟಲ್, ಚಂದ್ರಶೇಖರ ಜುಟ್ಟಲ್ ಮಲ್ಲಿಕಾರ್ಜುನಗೌಡ ಪಾಟೀಲ್, ಶಂಭಯ್ಯ ನೀರಲಗಿ, ಸುರೇಶ ತಳವಾರ, ವಿ.ವೈ.ಪಾಟೀಲ, ಮಹದೇವ ದೊಡಮನಿ, ರಾಮು ಮನಸಾಲಿ, ಪಿತಾಂಬ್ರಪ್ಪ ಬೀಳಾರ, ಭೀಮಣ್ಣ ವಾಲೀಕಾರ, ಮಲ್ಲಪ್ಪ ದೊಡ್ಡೋಲಿ, ಮಕಬುಲಸಾಬ ಅಲ್ಲಿಖಾನವರ, ಪಂಚಪ್ಪ ಸಣ್ಣೋಲೆ, ಶೇಖರ ತಳವಾರ, ಗುರುನಾಥ ಉಳ್ಳಿಕಾಶಿ, ಮಂಜು ಸಣ್ಣಪ್ಪನವರ ಉಪಸ್ಥಿತರಿದ್ದರು.

* * 

ಗೋವಿಂದಪ್ಪ ಜುಟ್ಟಲ್ ಟ್ರಸ್ಟ್‌ ಹೆಸರಲ್ಲಿ 10 ವರ್ಷದಿಂದ ಉಚಿತವಾಗಿ ವಿವಾಹ ಸಮಾರಂಭ  ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ
ಮಲ್ಲಿಕಾರ್ಜುನ ಸ್ವಾಮೀಜಿ
ಮುರಘಾ ಮಠ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.