ಧಾರವಾಡ: ಟೈಲ್ಸ್ ಕೆಲಸ ಮಾಡುವ ಯುವಕ ಗುರುವಾರ ನಸುಕಿನಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ಧಾರೆ. ನಗರದ ಹೊಸ ಯಲ್ಲಾಪುರದ ಆರೇರ ಓಣಿ ನಿವಾಸಿ ಕಾರ್ತಿಕ್ ರೋಕಡೆ (25) ಎಂಬುವವರೇ ಮೃತಪಟ್ಟ ಯುವಕ.
‘ಬೆಳಿಗ್ಗೆ 5.30ರ ಸುಮಾರಿಗೆ ಕಾರ್ತಿಕ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ವಾಂತಿ ಮಾಡಿಕೊಂಡ ಇವರು ಮೂರ್ಚೆ ಹೋದರು. ನಂತರ ನೀರು ಕುಡಿಸಿ ಮನೆಯವರು ಮಲಗಿಸಿದರು. ಆದರೆ, ಕೆಲ ಹೊತ್ತಿನ ನಂತರ ಎಬ್ಬಿಸಲು ಹೋದಾಗ ಆತ ಪ್ರತಿಕ್ರಿಯಿಸದಿದ್ದರಿಂದ ಗಾಬರಿಗೊಂಡ ಮನೆಯವರು ನೇರವಾಗಿ ಸಮೀಪದ ರಾಮನಗೌಡ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಅಲ್ಲಿ ವೈದ್ಯರು ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟು ಕೆಲಕಾಲ ಆಗಿದೆ ಎಂದು ತಿಳಿಸಿದರು’ ಎಂದು ಕಾರ್ತಿಕ್ ಸಂಬಂಧಿಕರು ತಿಳಿಸಿದರು.
‘ಇದೇ ತಿಂಗಳ 26ರಂದು ನಡೆಯಲಿರುವ ಅಣ್ಣನ ಮದುವೆಗೆ ಕಾರ್ತಿಕ್ ಸಿದ್ಧತೆಯಲ್ಲಿ ತೊಡಗಿದ್ದರು. ಆದರೆ, ವಿಧಿ ಅವರನ್ನು ಕರೆದುಕೊಂಡಿತು’ ಎಂದು ಸಂಬಂಧಿಕರು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.