ADVERTISEMENT

‘ಅರಣ್ಯ ರಕ್ಷಕರೇ ಇಲಾಖೆಯ ಬೆನ್ನೆಲುಬು’

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 6:55 IST
Last Updated 22 ಆಗಸ್ಟ್ 2014, 6:55 IST

ಹುಬ್ಬಳ್ಳಿ: ‘ಅರಣ್ಯ ರಕ್ಷಕರು ವೃತ್ತಿಯಲ್ಲಿ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು. ಅರಣ್ಯ ರಕ್ಷಕರೇ ಇಲಾಖೆಯ ಬೆನ್ನೆಲುಬು ಮತ್ತು ಮುಖವಾಣಿ. ಅರಣ್ಯ ರಕ್ಷಕರು ಉತ್ತಮ ಕೆಲಸ ಮಾಡಿದರೆ, ಅದರಿಂದ ಇಲಾಖೆಗೂ, ರಾಜ್ಯಕ್ಕೂ ಹೆಸರು ಬರುತ್ತದೆ’ ಎಂದು ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ಮಹೇಶ ಶಿರೂರು ಅಭಿಪ್ರಾಯಪಟ್ಟರು.

ಧಾರವಾಡದ ಗುಂಗರಗಟ್ಟಿ ಯಲ್ಲಿ ರುವ ಅರಣ್ಯ ತರಬೇತಿ ಸಂಸ್ಥೆಯಲ್ಲಿ ತರಬೇತಿ ನಿರತ ಅರಣ್ಯ ರಕ್ಷಕರ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಾನೂನಿನ ಪ್ರಕಾರ ಅರಣ್ಯ ಸಂಪತ್ತನ್ನು ಕಾಪಾಡುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಜನರ ಕಣ್ಣಿಗೆ ಕೆಟ್ಟವರಂತೆ ಕಾಣುವಂತಾಗಿದೆ. ಹೀಗಾಗಿ ಅರಣ್ಯ ಸಂಪತ್ತನ್ನು ಕಾಪಾಡುವುದರ ಜೊತೆಗೆ ಕಾನೂನಿನ ಅಡಿ ಜನಹಿತ ಕಾರ್ಯಕ್ರಮಗಳನ್ನೂ ಸಹ ಹಮ್ಮಿಕೊಳ್ಳುವ ಸವಾಲು ಅರಣ್ಯ ರಕ್ಷಕರ ಮುಂದಿದೆ’ ಎಂದರು.

ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರು ಮಾತನಾಡಿ, ‘ನಿಮ್ಮಲ್ಲಿಯ ಶಿಸ್ತು ಮತ್ತು ನಡೆಸಿಕೊಟ್ಟ ಘಟಿಕೋತ್ಸವ ಪಥಸಂಚ ಲನವು ನೀವು ಪಡೆದ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಸಂಸ್ಥೆ ಹೇಳಿಕೊಟ್ಟಿರುವ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡು ಯಶಸ್ವಿ ಅರಣ್ಯ ಅಧಿಕಾರಿಗಳಾಗಿರಿ’ ಎಂದು ಹಾರೈಸಿದರು.

ಅರಣ್ಯ ಇಲಾಖೆಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾದ ಮುಖ್ಯಸ್ಥರಾದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ಬಿ. ಜೆ. ಹೊಸಮಠ ಮಾತನಾಡಿ,  ‘ಅರಣ್ಯ ಸೇವೆಯು ಸದ್ಯದ  ದಿನಗಳಲ್ಲಿ ಅತ್ಯಂತ ಸವಾಲಿನ ಸೇವೆ. ತಾವುಗಳೆಲ್ಲಾ ಅತ್ಯಂತ ಜವಾಬ್ದಾರಿಯಿಂದ, ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು. ಭರದಿಂದ ಸಾಗುತ್ತಿರುವ ಆಧುನಿಕ ಜಗತ್ತಿನಿಂದಾಗಿ ಪರಿಸರದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿ ನೈಸರ್ಗಿಕ ವಿಕೋಪ ಹೆಚ್ಚಾಗುತ್ತಿವೆ’ಎಂದರು.

ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ರಾಮ ಮಾತನಾಡಿ, ‘ಯುವ ಅರಣ್ಯ ಸಿಬ್ಬಂದಿ ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಕೆಲಸ ಮಾಡಲು ಇಚ್ಛಿಸದೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಮತ್ತು ಅರಣ್ಯ ಅಭಿವೃದ್ಧಿ ನಿಗಮ ಹಾಗೂ ಇತರ ಪ್ರದೇಶಗಳಲ್ಲೂ ಉತ್ತಮವಾಗಿ ಕೆಲಸ ನಿರ್ವಹಿಸಿ’ ಎಂದರು.

ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ  ಎ. ಜಿ. ಅಪ್ಪೂರಾವ್ ವರದಿ ವಾಚಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಎಸ್. ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ನಿರೂಪಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ. ವೀರನಗೌಡರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.