ADVERTISEMENT

ಸದಾಶಿವ ಆಯೋಗ ವರದಿ ತಿರಸ್ಕರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 9:08 IST
Last Updated 1 ಫೆಬ್ರುವರಿ 2018, 9:08 IST

ಧಾರವಾಡ: ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳು ಬುಧವಾರ ಪ್ರತಿಭಟನಾ ರ‍್ಯಾಲಿ ನಡೆಸಿದವು.

ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡು ವಿವಿಧ ದಲಿತ ಸಂಘಟನೆಗಳ ಬೆಂಬಲಿಗರು, ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

‘ಆಯೋಗ ರಚನೆಯಾದ ನಂತರ ಅದರ ರಚನೆಯ ಉದ್ದೇಶಕ್ಕೆ ವಿರುದ್ಧವಾದ ಶಿಫಾರಸುಗಳನ್ನೇ ಮಾಡಿದೆ. ಕಾನೂನು ಪ್ರಕಾರ ಸಾಧುವಲ್ಲದ ಮತ್ತು ಸರ್ಕಾರಗಳಿಂದಲೂ ಜಾರಿ ಸಾಧ್ಯವಾಗದ ಶಿಫಾರಸುಗಳನ್ನು ಮಾಡುವ ಮೂಲಕ ಶಾಶ್ವತವಾಗಿ ಪರಿಶಿಷ್ಟರು ಕಚ್ಚಾಡಿಕೊಂಡಿರಲಿ ಎಂಬ ಷಡ್ಯಂತರ ಇದರಲ್ಲಿ ಇದ್ದಂತಿದೆ’ ಎಂದು ಮನವಿ ಪತ್ರದಲ್ಲಿ ದೂರಿದ್ದಾರೆ.

ADVERTISEMENT

‘ಕೆಲವರು ವರದಿ ಬಚ್ಚಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಮಾದಿಗ ಸಮುದಾಯವನ್ನು ಇತರೆ ಸಹೋದರ ಸಮುದಾಯಗಳಾದ ಲಂಬಾಣಿ, ಛಲವಾದಿ, ಕೊರಚ, ಕೊರಮ ಸೇರಿದಂತೆ ಇತ್ಯಾದಿ ಸಮಾಜಗಳ ವಿರುದ್ಧ ಎತ್ತಿಕಟ್ಟಿ ದ್ವೇಷಬೀಜ ಬಿತ್ತಲಾಗಿದೆ’ ಎಂದರು.

ಪಾಂಡುರಂಗ ಪಮ್ಮಾರ, ಬಸವರಾಜ ಮುತ್ತಳ್ಳಿ, ಮಂಜುನಾಥ ಭೋವಿ, ವೈ.ಬಿ. ಭಜಂತ್ರಿ, ಜಯಸಿಂಗ್ ನಾಯ್ಕ, ತಾಯಪ್ಪ ಪವಾರ, ತುಳಜಪ್ಪ ಪೂಜಾರ, ಕೃಷ್ಣಪ್ಪ ಚವ್ಹಾಣ, ದುರ್ಗಪ್ಪ ವಡ್ಡರ, ಭೀಮಪ್ಪ ನೇಮಿಕಲ್, ಬಸವರಾಜ ಭಜಂತ್ರಿ, ಎಫ್.ಡಿ. ಹುಲಮನಿ, ಮಾರುತಿ ವಡ್ಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.