ಧಾರವಾಡ: ‘ಪದ್ಮಾವತ್’ ಚಿತ್ರದ ಕುರಿತು ಗದ್ದಲ ಎದ್ದಾಗ ಮೌನ ಮುರಿಯದ ಮೂವರು ಖಾನ್ಗಳ ನಡೆ ನಾಚಿಕೆಗೇಡಿನ ಸಂಗತಿ’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.
‘ಚಿತ್ರರಂಗದ ಹಿರಿಯ ಎಂದೆನಿಸಿಕೊಂಡಿರುವ ನಟ ಅಮಿತಾ ಬಚ್ಚನ್ ಕೂಡಾ ತುಟಿ ಬಿಚ್ಚಲಿಲ್ಲ. ಸೆನ್ಸಾರ್ ಪ್ರಮಾಣ ಪತ್ರ ದೊರೆತರೂ ಚಿತ್ರದ ಬೆಂಬಲಕ್ಕೆ ಮುಂದಾಗಲಿಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಅಮಿತಾಬ್, ಪನಾಮ ಕುರಿತು ಯಾರೂ ಏನನ್ನೂ ಕೇಳಬಾರದು ಎಂದು ಟ್ವೀಟ್ ಮಾಡುತ್ತಾರೆ. ಇಂಥ ಮಾತು ಹೇಳಲು ಅವರಿಗೆ ನಾಚಿಕೆಯಾಗಬೇಕು. ನಾಗರಿಕ ಸಮಾಜದಲ್ಲಿರುವ ನಾವೆಲ್ಲರೂ ಲೆಕ್ಕಪತ್ರಕ್ಕೆ ಹೊಣೆಗಾರರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.
‘ಕಪ್ಪು ಹಣದ ವಿರುದ್ಧ ಸಮರ ಸಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ಅಕ್ರಮ ಆಸ್ತಿ ಹೊಂದಿರುವ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ‘ಆದಾಯ ತೆರಿಗೆ ಅಧಿಕಾರಿಗಳು, ಸಿದ್ಧಾರ್ಥ ಅವರ ಬಳಿ ₹ 650 ಕೋಟಿ ಅಘೋಷಿತ ಸಂಪತ್ತು ಇರುವುದನ್ನು ಪತ್ತೆ ಮಾಡಿದ್ದರು. ಈ ವಿಷಯದಲ್ಲಿ ಏಕೆ ಮೌನ ವಹಿಸಲಾಗಿದೆ’ ಎಂದು ಪ್ರಶ್ನಿಸಿದರು.
‘ಜನ ತಂತ್ರದ ಎಡೆಗೆ ನಮ್ಮ ನಡಿಗೆ’ ಎಂಬ ಮೊದಲ ಹಂತದ ರಾಜ್ಯ ಮಟ್ಟದ ಜನಾಂದೋಲನ ಹಾಗೂ ಜಾಗೃತಿ ಮತ್ತು ಸಂಕಲ್ಪ ಕಾರ್ಯಕ್ರಮ ಫೆ. 24ರಂದು ಕೂಡಲ ಸಂಗಮದಲ್ಲಿ ನಡೆಯಲಿದೆ. ಮಾ.2 ರಂದು ಹಾವೇರಿಯಲ್ಲಿ ಸಮಾವೇಶ ನಡೆಯಲಿದೆ. ಈ ಜಾಗೃತಿ ಜಾಥಾ ನಾಲ್ಕು ಜಿಲ್ಲೆಗಳಲ್ಲಿ ನಡೆಯಲಿದೆ. ನ್ಯಾ. ಸಂತೋಷ ಹೆಗಡೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.