ADVERTISEMENT

‘ಸವಿರುಚಿ’ ಸಂಚಾರಿ ಕ್ಯಾಂಟೀನ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 12:08 IST
Last Updated 6 ಜುಲೈ 2018, 12:08 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್‌ನಲ್ಲಿ ಉಪಾಹಾರ ಸೇವಿಸುವ ಮೂಲಕ ಡಾ. ಎಸ್.ಬಿ.ಬೊಮ್ಮನಹಳ್ಳಿ, ಸ್ನೇಹಲ್ ರಾಯಮಾನೆ ಚಾಲನೆ ನೀಡಿದರು. ಡಾ. ಎಚ್.ಎಚ್.ಕುಕನೂರ ಹಾಗೂ ಇತರರು ಇದ್ದಾರೆ.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್‌ನಲ್ಲಿ ಉಪಾಹಾರ ಸೇವಿಸುವ ಮೂಲಕ ಡಾ. ಎಸ್.ಬಿ.ಬೊಮ್ಮನಹಳ್ಳಿ, ಸ್ನೇಹಲ್ ರಾಯಮಾನೆ ಚಾಲನೆ ನೀಡಿದರು. ಡಾ. ಎಚ್.ಎಚ್.ಕುಕನೂರ ಹಾಗೂ ಇತರರು ಇದ್ದಾರೆ.   

ಧಾರವಾಡ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಪರಿಚಯಿಸಿದ ಸವಿರುಚಿ ಸಂಚಾರಿ ಕ್ಯಾಂಟೀನ್‌ಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ ಶುಕ್ರವಾರ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿಸಿದ ನಂತರ ಮಾತನಾಡಿದ ಡಾ. ಬೊಮ್ಮನಹಳ್ಳಿ, ‘ಶುಚಿರುಚಿಯಾದ ಉಪಹಾರ, ಊಟವನ್ನು ಗ್ರಾಹಕರು ಇರುವಲ್ಲಿಗೇ ತೆರಳಿ ಯೋಗ್ಯ ದರದಲ್ಲಿ ಒದಗಿಸಬೇಕು. ಇದರಿಂದ ಮಾತ್ರ ಉತ್ತಮ ಆದಾಯ ಗಳಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಗುಣಮಟ್ಟ ಹಾಗೂ ಸೇವೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಜಿಲ್ಲೆಯ ಜನರಿಗೆ ಒಳ್ಳೆಯ ಆಹಾರ ಪೂರೈಸಬೇಕು’ ಎಂದು ಹಾರೈಸಿದರು.

ಕ್ಯಾಂಟೀನ್‌ನಲ್ಲಿ ಉಪಹಾರ ಸವಿದ ಸ್ನೇಹಲ್ ಮಾತನಾಡಿ, ‘ಮಹಿಳೆಯರು ಸ್ವಾವಲಂಬಿಯಾಗಲು ಸರ್ಕಾರ ರೂಪಿಸಿರುವ ಸವಿರುಚಿ ಕ್ಯಾಂಟೀನ್‌ ಸಹಕಾರಿಯಾಗಲಿದೆ. ಮಹಿಳಾ ಒಕ್ಕೂಟದ ಸದಸ್ಯರು ಇದರ ಲಾಭ ಪಡೆಯಬೇಕು’ ಎಂದರು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್‌.ಕುಕನೂರ ಮಾತನಾಡಿ,‘ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್ ಘೋಷಣೆಯಾಗಿತ್ತು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ₹10ಲಕ್ಷ ವರೆಗೆ ಬಡ್ಡಿ ರಹಿತ ಸಾಲವನ್ನು ಜಿಲ್ಲಾ ಮಹಿಳಾ ಒಕ್ಕೂಟಕ್ಕೆ ನೀಡಲಾಗಿದೆ. ಈ ಹಣದಲ್ಲಿ ₹6ಲಕ್ಷ ವೆಚ್ಚದಲ್ಲಿ ವಿನ್ಯಾಸಗೊಳಿಸಿದ ವಾಹನ, ಉಳಿದ ₹4ಲಕ್ಷದಲ್ಲಿ ಅಡುಗೆ ಸಾಮಗ್ರಿಗಳು, ಪಾಕೋಪಕರಣ, ಪೀಠೋಪಕರಣಗಳನ್ನು ಖರೀದಿಸಿ ವಹಿವಾಟು ನಿರ್ವಾಹಿಸಬೇಕು’ ಎಂದು ಸಲಹೆ ನೀಡಿದರು.

‘6 ತಿಂಗಳ ಕಾಲಾವಕಾಶದ ನಂತರ ಪ್ರತಿ ತಿಂಗಳು ₹15ಸಾವಿರದಂತೆ ಮರು ಪಾವತಿ ಮಾಡಬೇಕು. ಕಾಮಧೇನು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಕ್ಕೆ ಈ ಸೌಲಭ್ಯ ಕಲ್ಪಿಸಲಾಗಿದೆ. ಆರಂಭದಲ್ಲಿ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಸವಿರುಚಿ ಕ್ಯಾಂಟೀನ್ ವಾಹನ ಸಂಚರಿಸಲಿದೆ. ಗಳಿಕೆಯ ಆಧಾರದ ಮೇಲೆ ನಂತರ ನಿರ್ದಿಷ್ಟ ಪಥವನ್ನು ಅಳವಡಿಸಿಕೊಳ್ಳಲಾಗುವುದು’ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್.ಎಸ್.ಮಾಸಮಡ್ಡಿ, ಪುಟ್ಟಪ್ಪ, ಮಹಿಳಾ ಅಭಿವೃದ್ಧಿ ನಿಗಮದ ನಸ್ರೀನ್ ಹಕೀಂ, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸೋನಿಯಾ ಬ್ಯಾಳಿ, ಉಪಾಧ್ಯಕ್ಷೆ ಅನಸೂಯಾ ಲಿಗಾಡಿ, ನವಲಗುಂದ ತಾಲ್ಲೂಕು ಘಟಕದ ಅಧ್ಯಕ್ಷೆ ಬಸಮ್ಮ ಮೆಳವಂಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.