ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲಿಗನೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಮಾಹಿತಿ ನೀಡಿ, ಕೂಲಿಗಾಗಿ ಸಾಮೂಹಿಕ ಅರ್ಜಿ ಸಲ್ಲಿಸುವ ಕಾರ್ಯಕ್ರಮ ಸೋಮವಾರ ನಡೆಯಿತು.
ರೋಣ ತಾಲ್ಲೂಕು ಪಂಚಾಯ್ತಿ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲ್ಲೂಕು ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕೃಷಿಕೂಲಿಕಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ ’ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಹತ್ವದ ಯೋಜನೆಯಾಗಿದೆ. ಇದು ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ.
ಇದರಿಂದಾಗಿ ಹಳ್ಳಿಗಳ ರಸ್ತೆ, ಕೆರೆ, ಶೌಚಾಲಯ, ಬದುವು ನಿರ್ಮಾಣ, ಸಸಿ ಬೆಳೆಸುವಿಕೆ, ಆಟದ ಮೈದಾನ, ಉದ್ಯಾನ, ಸಮುದಾಯ ಭವನ, ಒಕ್ಕಲುತನದ ಕಣ ನಿರ್ಮಾಣದಂತಹ ಒಟ್ಟು 21 ಅಂಶಗಳ ಕಾರ್ಯಕ್ರಮಗಳನ್ನು ಸರ್ಕಾರವು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯ್ತಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ಯೋಜನೆಯ ಲಾಭ ಗ್ರಾಮೀಣ ಜನರಿಗೆ ತಲುಪದೇ ಅವರು ಗುಳೇ ಹೋಗುವದು ಇಂದಿಗೂ ತಪ್ಪಿಲ್ಲ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಗ್ರಾಮೀಣರು ಮುಂದಾಗಬೇಕು. ಒಂದು ಕುಟುಂಬಕ್ಕೆ 150 ದಿನ ಕೆಲಸ ನೀಡಿ ದಿನಕ್ಕೆ ₹ 224 ಕೂಲಿ ಪಡೆಯಬಹುದು. ಕಾರಣ ಗ್ರಾಮೀಣರು ಸಂಘಟನೆಯ ಮೂಲಕ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದು 10 ವರ್ಷ ಕಳೆದರೂ ಕೃಷಿಕೂಲಿಕಾರರಿಗೆ ಉದ್ಯೋಗ ಮಾಹಿತಿ ನೀಡುವಲ್ಲಿ ಹಾಗೂ ಕೆಲಸ ನಿರ್ವಹಿಸುವಲ್ಲಿ ಗ್ರಾಮ ಪಂಚಾಯ್ತಿಗಳು ಸಂಪೂರ್ಣ ವಿಫಲವಾಗಿವೆ.
ಅಧಿಕಾರ ವಿಕೇಂದ್ರೀಕರಣವನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಕರ್ನಾಟಕ ಸರ್ಕಾರಕ್ಕೆ ಸಲ್ಲುತ್ತದೆ. ಗ್ರಾಮೀಣ ಅಭಿವೃದ್ಧಿಗಾಗಿ ಎಲ್ಲರ ಸಹಕಾರ, ಪಾಲ್ಗೊಳ್ಳುವಿಕೆ ಅತ್ಯಗತ್ಯ, ಗಾಂಧೀಜಿ ಅವರ ಕನಸನ್ನು ನನಸಾಗಿಸಲು ಪಣತೊಟ್ಟು ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಕೂಡ್ಲೆಪ್ಪ ಗುಡಿಮನಿ, ಪೀರು ರಾಠೋಡ ಮಾತನಾಡಿದರು. ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಪಿಡಿಓ ಹಾಗೂ ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.