ADVERTISEMENT

ಎರಡನೇ ಬಾರಿ ಚುನಾವಣೆ: ಅಭ್ಯರ್ಥಿಗಳೇ ಇಲ್ಲ!

ಚಿಕ್ಕವಡ್ಡಟ್ಟಿ ಗ್ರಾಮಸ್ಥರ ಅಸಹಕಾರ: ಮುರಡಿ ಪಂಚಾಯ್ತಿ ಅಧ್ಯಕ್ಷರ ಆಯ್ಕೆ ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 31 ಜುಲೈ 2015, 11:05 IST
Last Updated 31 ಜುಲೈ 2015, 11:05 IST

ಮುಂಡರಗಿ: ತಮ್ಮ ಗ್ರಾಮಕ್ಕೆ ನೂತನ ಗ್ರಾಮ ಕೇಂದ್ರ ಸ್ಥಾನ ನೀಡದೆ ಇರುವ ಕ್ರಮವನ್ನು ವಿರೋಧಿಸಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಜನರು ಪುನಾ ಚುನಾವಣೆಯನ್ನು ಬಹಿಷ್ಕರಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಕಳೆದ ತಿಂಗಳು ರಾಜ್ಯದಾದ್ಯಂತ ಜರು ಗಿದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಇದೇ ಕಾರಣವನ್ನು ಮುಂದಿಟ್ಟುಕೊಂಡು ಗ್ರಾಮಸ್ಥರು ಚುನಾವಣೆಗೆ ಸ್ಪರ್ಧಿಸದೆ  ದೂರ ಉಳಿದಿದ್ದರು. ಗ್ರಾಮ ಪಂಚಾಯ್ತಿ ಚುನಾವಣಾ ಪೂರ್ವದಲ್ಲಿ ತಾಲ್ಲೂಕಿನ ಮುರುಡಿ, ಬೀಡನಾಳ ಹಾಗೂ ಶಿರೂರ ಗ್ರಾಮಗಳಿಗೆ ನೂತನ ಗ್ರಾಮ ಪಂಚಾಯ್ತಿ ಸ್ಥಾನ ಮಾನ ಗಳನ್ನು ನೀಡಲಾಗಿತ್ತು. ಚಿಕ್ಕವಡ್ಡಟ್ಟಿ ಗ್ರಾಮವನ್ನು ಮುರುಡಿ ಗ್ರಾಮ ಪಂಚಾಯ್ತಿಯಲ್ಲಿ ವೀಲಿನಗೊಳಿಸಲಾಗಿತ್ತು.

ತಮ್ಮ ಗ್ರಾಮಕ್ಕೆ ಗ್ರಾಮ ಪಂಚಾಯ್ತಿ ಸ್ಥಾನ ದೊರೆಯದಿರುವುದನ್ನು ವಿರೋಧಿ ಸಿದ ಗ್ರಾಮಸ್ಥರು ತಮ್ಮ ಗ್ರಾಮಕ್ಕೂ ನೂತನ ಗ್ರಾ.ಪಂ.ಸ್ಥಾನ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿ ಕೊಂಡಿದ್ದರು. ತಮ್ಮ ಬೇಡಿಕೆ ಈಡೇರದೆ ಇದ್ದ ಕಾರಣ ಗ್ರಾಮಸ್ಥರೆಲ್ಲ ಒಂದಾಗಿ ಚುನಾವಣೆಯಲ್ಲಿ ಯಾರೊಬ್ಬರೂ ಸ್ಪರ್ಧಿಸದೆ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.

ಚುನಾವಣಾ ಆಯೋಗವು ನಿಯ ಮಾನುಸಾರ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಉಪಚುನಾವಣೆ ಯನ್ನು ಘೋಷಿಸಿತು.  ಇದೇ 22ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ನಿಗದಿಗೊಳಿಸಿ ಅ.2ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಹಟಕ್ಕೆ ಬಿದ್ದಿರುವ ಚಿಕ್ಕವಡ್ಡಟ್ಟಿ ಗ್ರಾಮಸ್ಥರು ಈ ಬಾರಿಯೂ ಯಾರೊಬ್ಬರೂ ನಾಮ ಪತ್ರ ಸಲ್ಲಿಸದೆ ದೂರ ಉಳಿದಿದ್ದಾರೆ. ನೂತನ ಮುರುಡಿ ಗ್ರಾಮ ಪಂಚಾ ಯ್ತಿಯು ತಾಲ್ಲೂಕಿನ ಗುಡ್ಡದಬೂದಿ ಹಾಳ, ಮುರುಡಿ, ಮುರುಡಿ ತಾಂಡಾ ಹಾಗೂ ಚಿಕ್ಕವಡ್ಡಿ ಗ್ರಾಮಗಳನ್ನು ಒಳ ಗೊಂಡಿದ್ದು, ಒಟ್ಟು 14 ಸ್ಥಾನಗಳನ್ನು ಹೊಂದಿದೆ. ಅದರಲ್ಲಿ ಚಿಕ್ಕವಡ್ಡಟ್ಟಿ ಗ್ರಾಮವು ಒಟ್ಟು ಆರು ಸದಸ್ಯರ ಬಲವನ್ನು ಹೊಂದಿದೆ. ನೂತನ ಗ್ರಾಮ ಪಂಚಾಯ್ತಿಗೆ ಈಗ ಕೇವಲ 8 ಸದಸ್ಯರು ಮಾತ್ರ ಆಯ್ಕೆಯಾಗಿದ್ದು, ಚಿಕ್ಕವಡ್ಡಟ್ಟಿ ಗ್ರಾಮದ 6 ಸ್ಥಾನಗಳಿಗೆ ಚುನಾವಣೆ ನಡೆಯಲೇಬೇಕಿದೆ.

ಎರಡನೆಯ ಬಾರಿ ಚುನಾವಣೆ ಘೋಷಣೆಯಾದಾಗ ರೋಣ ಶಾಸಕ ಜಿ.ಎಸ್‌.ಪಾಟೀಲ ಹಾಗೂ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಚಿಕ್ಕವಡ್ಡಟ್ಟಿ ಗ್ರಾಮಸ್ಥರನ್ನು ಒಗ್ಗೂಡಿಸಿ ಡಂಬಳ ಗ್ರಾಮದಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಗ್ರಾಮಸ್ಥರು ಯಾವುದೇ ನಿರ್ಣಯಕ್ಕೆ ಬಾರದಿದ್ದರಿಂದ ಸಭೆ ವಿಫಲವಾಯಿತು ಎಂದು ಹೇಳಲಾಗುತ್ತಿದೆ. ಚಿಕ್ಕವಡ್ಡಟ್ಟಿ ಗ್ರಾಮಸ್ಥರು ಚುನಾ ವಣೆಯಿಂದ ದೂರ ಉಳಿದಿದ್ದರಿಂದ ಮುರುಡಿ ನೂತನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಯೂ ಸ್ಥಗಿತಗೊಂಡಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಯಲ್ಲಿ ಚಿಕ್ಕವಡ್ಡಟ್ಟಿ ಗ್ರಾಮದ ಆರು ಸ್ಥಾನಗಳು ಪ್ರಮುಖ ಸ್ಥಾನ ವಹಿಸಲಿದ್ದು, ನೂತನವಾಗಿ ಆಯ್ಕೆಯಾದವರೆಲ್ಲ ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಇಂತಹ ಸಂದರ್ಭದಲ್ಲಿ ಚುನಾವಣಾ ಆಯೋಗವು ಚುನಾವಣೆಗೆ ಮೂರನೇ ಅವಕಾಶ ನೀಡುತ್ತದೆ. ಮೂರನೇ ಬಾರಿಯು ಚುನಾವಣೆ ಬಹಿಷ್ಕರಿಸಿದರೆ ಮುಂದೆ ಆಯೋಗವು ಸ್ವತಂತ್ರ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಗ್ರಾಮಸ್ಥರೆಲ್ಲ ಒಂದಾಗಿ ಎರಡು ಚುನಾವಣೆಗಳಿಂದ ದೂರ ವಿದ್ದೇವೆ. ಗ್ರಾಮಸ್ಥರೆಲ್ಲ ಇನ್ನೊಮ್ಮೆ ಸಭೆ ಸೇರಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದೇವೆ’ ಎನ್ನುತ್ತಾರೆ ಚಿಕ್ಕವಡ್ಡಟ್ಟಿ ಗ್ರಾಮದ ಯುವ ಮುಖಂಡ ಈಶ್ವರ ರಂಗಪ್ಪನವರ.

ಚಿಕ್ಕವಡ್ಡಟ್ಟಿ ಗ್ರಾಮದ ಚುನಾವಣಾ ಬೆಳವಣಿಗೆ ಕುರಿತಂತೆ ಸಮಗ್ರ ವರದಿ ಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ಆದೇಶದಂತೆ ನಡೆದು ಕೊಳ್ಳಲಾಗುವುದು’.  -ಡಿ.ಮೋಹನ, ತಾ.ಪಂ.ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT