ADVERTISEMENT

ಕಪ್ಪತಗುಡ್ಡ: ಮಠಾಧೀಶರ ಮನವಿ

ಬಳ್ಳಾರಿ ಮಠಾಧೀಶರ ಧರ್ಮ ಪರಿಷತ್‌ ವತಿಯಿಂದ ಡಿ.ಸಿ.ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 6:51 IST
Last Updated 11 ಜನವರಿ 2017, 6:51 IST

ಗದಗ: ಕಪ್ಪತಗುಡ್ಡಕ್ಕೆ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದ ಸ್ಥಾನಮಾನವನ್ನು  ವಾಪಸ್ ನೀಡಬೇಕು. ಈ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಬಾರದು ಎಂದು ಆಗ್ರಹಿಸಿ ಬಳ್ಳಾರಿ ಮಠಾಧೀಶರ ಧರ್ಮ ಪರಿಷತ್‌ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಕೊಟ್ಟೂರು ಸಿದ್ಧಲಿಂಗ ಶಿವಾ ಚಾರ್ಯ ಸ್ವಾಮೀಜಿ, ನಂದಿಪುರ ಮಹೇ ಶ್ವರ ಸ್ವಾಮೀಜಿ, ಹಿರೇಹಡಗಲಿ ಹಾಲ ವೀರಪ್ಪಜ್ಜ ಸ್ವಾಮೀಜಿ, ಬೆಣ್ಣಿಹಳ್ಳಿಯ ಪಂಚಾಕ್ಷರ ಸ್ವಾಮೀಜಿ, ಹಡಗಲಿಯ ಹಿರಿಶಾಂತವೀರ ಸ್ವಾಮೀಜಿ, ಹಂಪ ಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಮೈನಳ್ಳಿ , ವಡ್ಡಟ್ಟಿ, ಹಿರೇಮಲ್ಲನಕೇರಿ ಸ್ವಾಮೀಜಿ ಸೇರಿದಂತೆ 10ಕ್ಕೂ ಹೆಚ್ಚು ಮಠಾಧೀಶರು ಈ ನಿಯೋಗದಲ್ಲಿದ್ದರು.

ಕಪ್ಪತಗುಡ್ಡ ಔಷಧೀಯ ಸಸ್ಯಗಳ ಆಗರ. ಜೀವ ವೈವಿಧ್ಯ ತಾಣ. ಹೇರಳ ಖನಿಜ, ವನ್ಯ ಸಂಪತ್ತು ಇಲ್ಲಿದೆ. ಈ ಪ್ರದೇಶದ ರಕ್ಷಣೆ ಸರ್ಕಾರದ ಜವಾಬ್ದಾರಿ. ಸ್ಥಾನ ಮಾನ ವಾಪಸ್‌ ಪಡೆದಿರುವುದರಿಂದ ಈ ಭಾಗಕ್ಕೆ ಘೋರ ಅನ್ಯಾಯ ಮಾಡಿದಂತಾಗಿದೆ. ಪರಿಸರ ಉಳಿಸಲು ನಿಯಮ ರಚಿಸಿ, ಅದನ್ನು ಅನುಷ್ಠಾನಗೊಳಿಸಬೇಕಾದ ಅರಣ್ಯ ಇಲಾಖೆಯೇ ಪರಿಸರವನ್ನು ಹಾಳು ಮಾಡುತ್ತಿದ್ದು, ಅದಕ್ಕೆ ಸ್ಥಾನಮಾನ ರದ್ದುಪಡಿಸಿ ಹೊರಡಿಸಿದ ಆದೇಶವೇ ಉದಾಹರಣೆ ಎಂದು ಆರೋಪಿಸಿದರು.

ಸರ್ಕಾರ ಪ್ರಭಾವಿಗಳ ಒತ್ತಡಕ್ಕೆ ಮಣಿದು, ಕಪ್ಪತಗುಡ್ಡಕ್ಕೆ ನೀಡಿದ್ದ ಸಂರಕ್ಷಿತ ತಾಣದ ಸ್ಥಾನಮಾನ ರದ್ದುಪಡಿಸಿದೆ ಎಂದು ಆರೋಪಿಸಿದ ಮಠಾಧೀಶರು,  ತ್ವರಿತವಾಗಿ ವನ್ಯಜೀವಿ ಮಂಡಳಿ ಸಭೆ ನಡೆಸಿ, ಮರು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.