ADVERTISEMENT

ಕಪ್ಪತ್ತಗುಡ್ಡಕ್ಕೆ ಕೈಹಾಕಿದವರ ಮುಖ ಕಪ್ಪಗಾಗುತ್ತೆ

ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದ ಸರ್ಕಾರ: ಪಾಟೀಲ ಪುಟ್ಟಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:01 IST
Last Updated 11 ಮಾರ್ಚ್ 2017, 11:01 IST
ನರಗುಂದ: ಔಷಧೀಯ ಸಸ್ಯ ಸಂಪತ್ತನ್ನು ಹೊಂದಿರುವ ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿಬೆಟ್ಟಗಳಿದ್ದಂತೆ. ಅಂತಹ ಪ್ರದೇಶವನ್ನು ರಾಜ್ಯಸರಕಾರ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಗಣಿಗಾರಿಕೆಗೆ ನೀಡುತ್ತಿರುವುದು ದುರದೃಷ್ಟಕರ, ಇಂಥಹ ಕಪ್ಪತ್ತಗುಡ್ಡಕ್ಕೆ ಕೈಹಾಕಿದವರ  ಮುಖ ಕಪ್ಪಗಾಗುತ್ತೆ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪನವರು ಎಚ್ಚರಿಸಿದರು.
 
ಗುರುವಾರ ತಾಲೂಕಿನ ಭೈರನಹಟ್ಟಿ ಗ್ರಾಮದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠದ ಆಶ್ರಯದಲ್ಲಿ ಕರ್ನಾಟಕ ಏಕೀಕರಣಕ್ಕೆ 60 ವರ್ಷದ ಸಂದರ್ಭದಲ್ಲಿ ಹಮ್ಮಿ ಕೊಂಡಿದ್ದ 60 ಏಕೀಕರಣ ಹೋರಾಟ ಗಾರರ ಉಪನ್ಯಾಸ ಮಾಲೆ ಕಾರ್ಯ ಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 
ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಡಾ.ತೋಂಟದ ಸಿದ್ದಲಿಂಗ ಶ್ರೀಗಳು ನೇತೃತ್ವದಲ್ಲಿ ನಾಡಿನ ಮಠಾಧೀಶರು ಹಾಗೂ ವಿವಿಧ ಕನ್ನಡಪರ ಸಂಘಟನೆ ಗಳು 30 ದಿವಸಗಳ ಕಾಲ ಧರಣಿ ಮಾಡಿದರೂ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ.

ಒಂದು ವೇಳೆ ಕಪ್ಪತ್ತಗುಡ್ಡವನ್ನು  ಕರ್ನಾಟಕ  ಸರಕಾರ ಸಂರಕ್ಷಿತ ಪ್ರದೇಶ ಘೋಷಿಸದೇ ಹೋದರೆ ಸರಕಾರದ ವಿರುದ್ಧ ನನ್ನ ಉಸಿರು ಇರುವರೆಗ ಗದುಗಿನ ಶ್ರೀಗಳಿಗೆ ಬೆಂಗಾವಲಾಗಿ ಉಗ್ರ ಹೋರಾಟ ಹಮ್ಮಿ ಕೊಳ್ಳುತ್ತೇವೆ ಎಂದು ಎಚ್ಚರಿಸಿದರು. 
 
ನಮ್ಮ ಮುಖ್ಯಮಂತ್ರಿಗಳು ಶಾಸಕ ರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುವು ದನ್ನು ಬಿಟ್ಟು ಕನ್ನಡ ನಾಡನ್ನು ಸುತ್ತಿ  ಕರ್ನಾಟಕದ  ಇತಿಹಾಸವನ್ನು ಅರಿಯಲಿ ಸಲಹೆ ಮಾಡುವುದು ಉಚಿತ ಎಂದರು. 
 
ಸಣ್ಣ ಹಳ್ಳಿಯಲ್ಲಿ ಇದ್ದುಕೊಂಡು ಸರ್ಕಾರ ಮಾಡದಂತಹ ಕಾರ್ಯ ಮಾಡುತ್ತ ಕನ್ನಡ ನಾಡು-ನುಡಿಯ ಏಳ್ಗೆಗಾಗಿ ಶ್ರಮಿಸುತ್ತಿರುವ ಭೈರನಹಟ್ಟಿ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಪಾಪು ಹರ್ಷ ವ್ಯಕ್ತಪಡಿಸಿದರು. ಅತಿಥಿಗಳಾಗಿದ್ದ ರವೀಂದ್ರ ದೊಡ್ಡ ಮೇಟಿ ಮಾತನಾಡಿ, ಕರ್ನಾಟಕ ಏಕೀ ಕರಣಕ್ಕೆ ಹಲವಾರು ಜನ ಹೋರಾಡಿ ದ್ದಾರೆ. ಅವರ ಕಾರ್ಯ ಸ್ಮರಣೀಯ ಎಂದರು.
 
ಸಾನ್ನಿಧ್ಯವಹಿಸಿ ಶಾಂತಲಿಂಗ ಶ್ರೀ ಮಾತನಾಡಿದರು. ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಫ್ ದಂಡಿನ ದಂಪತಿಯನ್ನು, ಅದರಗುಂಚಿ ಶಂಕರ ಗೌಡ್ರ ಸಹೋದರ ಹಾಗೂ ಹಿರಿಯರ ವಿಭಾಗದ ಅಂತರರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಯಲ್ಲಿ  3ನೇ ರಾಂಕ್‌ ಪಡೆದ ವಿರುಪಾಕ್ಷಗೌಡ ಪಾಟೀಲ,  ಬಾಲ ವಿಕಾಸ ಅಕಾಡೆಮಿ  ಅಧ್ಯಕ್ಷ  ವೇದವ್ಯಾಸ ಕೌಲಗಿ, ಕವಿವ  ಸಂಘದ ಕಾಯದರ್ಶಿ  ಶಂಕರ ಹಲಗತ್ತಿ ಅವರನ್ನು ಶ್ರೀಮಠದ ವತಿಯಿಂದ ಸತ್ಕರಿಸಲಾಯಿತು.
ವೇದಿಕೆ ಮೇಲೆ ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಕ್ಷೇತ್ರಶಿಕ್ಷಣ ಅಧಿಕಾರಿ ಎಸ್.ಎನ್.ಹುಗ್ಗಿ, ಶೇಖರಗೌಡ ಪಾಟೀಲ, ಶಿವಾನಂದ ಶೇಬಣ್ಣವರ, ಎಸ್.ಎನ್.ಪೂಜಾರ, ಪಿ.ಎಸ್.ಅಣ್ಣಿಗೇರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.