ADVERTISEMENT

ತುಂಬಿ ಹರಿದ ಲಂಡಿಹಳ್ಳ

​ಪ್ರಜಾವಾಣಿ ವಾರ್ತೆ
Published 11 ಮೇ 2017, 6:42 IST
Last Updated 11 ಮೇ 2017, 6:42 IST

ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ಸಮೀಪದ ಶಿಗ್ಲಿ, ಗೋವನಾಳ, ರಾಮಗಿರಿ, ಗೊಜನೂರು, ಮಾಗಡಿ, ಅಡರಕಟ್ಟಿ, ದೊಡ್ಡೂರು, ಬಟ್ಟೂರು, ಪುಟಗಾವ್‌ಬಡ್ನಿ, ಹುಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯಿತು.

ಲಕ್ಷ್ಮೇಶ್ವರದಲ್ಲಿ ಒಂದೇ ದಿನದಲ್ಲಿ 56.ಮಿ.ಮೀ. ಮಳೆಯಾಗಿದ್ದು, ಪರಿಣಾಮ  ಲಂಡಿಹಳ್ಳ ತುಂಬಿ ಹರಿಯಿತು. ಮನೆಗಳಿಗೆ ನುಗ್ಗಿದ ನೀರು: ವಿನಾಯಕ ನಗರದ ಜಯಲಕ್ಷ್ಮೀ ಕರೇವಾಡಿಮಠರ ಮನೆಗೆ ಮಳೆ ನೀರು ನುಗ್ಗಿ ದಿನಬಳಕೆ ವಸ್ತುಗಳು ಹಾನಿಗೀಡಾದವು.

ಹಿಂದಿನ ವರ್ಷವೂ ಸಹ ಇದೇ ರೀತಿ ಮಳೆ ನೀರು ಇಲ್ಲಿಯ ಮನೆಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಆಗ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗಿತ್ತು. ಆದರೂ ಸಹ ಯಾವುದೇ ಪ್ರಯೋಜನ ಆಗದೆ ಈ ಬಾರಿಯೂ ಸಹ ಕರೇವಾಡಿಮಠರ ಮನೆಗೆ ನೀರು ನುಗ್ಗಿದೆ.

ADVERTISEMENT

ಇಲ್ಲಿನ ಜನ್ನತ್ ನಗರದಲ್ಲೂ ಎರಡು ಮನೆಗಳಿಗೆ ನೀರು ನುಗ್ಗಿದೆ. ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಕಟ್ಟಡದ ಮೇಲೆ ಮರವೊಂದು ಮುರಿದು ಬಿದ್ದಿದೆ.  ಬಸ್ತಿಬಣದ ಅಡಿವೆಪ್ಪ ಉಮಚಗಿ ಮತ್ತು ಫಕ್ಕೀರಪ್ಪ ಉಮಚಗಿ ಎಂಬುವವರ ಎರಡು ಬಣಿವೆಗಳ ಸುತ್ತ ಮಳೆ ನೀರು ನಿಂತಿದೆ.

ರಸ್ತೆ ಮೇಳೆ ಹರಿದ ನೀರು: ಒಂದು ಗಂಟೆ ನಿರಂತವಾಗಿ ಮಳೆಯಾಗ ಕಾರಣ ಇಲ್ಲಿನ ಭಾನು ಮಾರ್ಕೆಟ್‌ ಎದುರಿನ ರಸ್ತೆ ಮೇಲೆ ಮೊಣಕಾಲಿನವರೆಗೆ ನೀರು ನಿಂತಿತ್ತು. ಇದರಿಂದಾಗಿ ಸಂಚಾರಕ್ಕೆ ಕೆಲ ಹೊತ್ತು ಅಡಚಣೆಯಾಯಿತು.

ವಿದ್ಯುತ್‌ ವ್ಯತ್ಯಯ: ಭಾರಿ ಗಾಳಿ,  ಮಳೆಯಿಂದಾಗಿ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರ ಹಿಂದಿನ ಪುರಸಭೆ ಸಿಬ್ಬಂದಿ ಕಾಲೊನಿಯಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದರಿಂದ ಸಂಜೆ 6 ರಿಂದ ರಾತ್ರಿ 10.30ರ ವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ಮಂಗಳವಾರದ ಮಳೆ ತಂಪು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.