ADVERTISEMENT

ನಗರದಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 11 ಮೇ 2017, 6:46 IST
Last Updated 11 ಮೇ 2017, 6:46 IST

ಗದಗ: ಗದಗ–ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ತಡರಾತ್ರಿ  ಉತ್ತಮ ಮಳೆಯಾಗಿದೆ. ಶಿರಹಟ್ಟಿ ತಾಲ್ಲೂಕಿನ ಹರಿಪೂರ, ಖಾನಾಪೂರದಲ್ಲಿ ಬುಧವಾರ ಸಂಜೆ ಅರ್ಧ ಗಂಟೆಗಳ ಕಾಲ ಬಿರುಸಿನ ಮಳೆ ಸುರಿದಿದೆ.

ಮಂಗಳವಾರ ರಾತ್ರಿ ಸುರಿದ ಮಳೆಯಿಂದ ನಗರದ ಹಲವೆಡೆ ಚರಂಡಿಗಳು ಉಕ್ಕಿ ರಸ್ತೆಗೆ ಹರಿದಿವೆ. ಮಹೇಂದ್ರಕರ ವೃತ್ತ, ಜವಳಗಲ್ಲಿ, ಖಾನತೋಟ, ಡೋರಗಲ್ಲಿ, ಅಂಬೇಡ್ಕರ್ ನಗರ, ಕಂಬಾರ ಓಣಿ, ಗಂಗಾಪೂರ ಪೇಟೆ, ಡಿ.ಸಿ ಮಿಲ್‌ ರಸ್ತೆ, ಎಸ್.ಎಂ.ಕೃಷ್ಣಾ ನಗರ, ಶಹಪೂರ ಪೇಟೆ, ಬೆಟಗೇರಿಯ ಕುರಹಟ್ಟಿ ಪೇಟೆ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದವರೆಗೆ ನೀರು ಕಟ್ಟಿಕೊಂಡು ನಿಂತಿತ್ತು. ಕಳೆದೊಂದು ವಾರದಿಂದ ನಗರದಲ್ಲಿ ಮಳೆಯಾಗುತ್ತಿರುವುದರಿಂದ, 40 ಡಿಗ್ರಿ ಆಸುಪಾಸಿನಲ್ಲಿದ್ದ ಉಷ್ಣಾಂಶ ಸದ್ಯ 36 ಡಿಗ್ರಿ ಸೆಲ್ಸಿಯಸ್‌ಗೆ ಇಳಿದೆ.

ಮಳೆಗೆ ತುಂಬಿ ಹರಿದ ಚೆಕ್ ಡ್ಯಾಂ
ಲಕ್ಷ್ಮೇಶ್ವರ: ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಮಾಗಡಿಯಿಂದ ಪುಟಗಾಂವ್‌ ಬಡ್ನಿ ನಡುವೆ ಇರುವ ದೊಡ್ಡ ಹಳ್ಳ ತುಂಬಿ ಹರಿಯಿತು. ಹಳ್ಳಕ್ಕೆ ಅಲ್ಲಲ್ಲಿ ನಿರ್ಮಿಸಲಾಗಿರುವ ಚೆಕ್‌ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಇದರಿಂದ ಜಾನುವಾರುಗಳಿಗೆ ಕುಡಿಯಲು ನೀರು ಲಭಿಸಿದಂತಾಗಿದೆ.

ADVERTISEMENT

ದೊಡ್ಡ ಹಳ್ಳವು ಸುಮಾರು 10 ಕಿ.ಮೀ ದೂರ ಹರಿದು ಮುಂದೆ ತುಂಗಭದ್ರಾ ನದಿಯನ್ನು ಸೇರುತ್ತದೆ.  ಈ ಹಳ್ಳಕ್ಕೆ ಪ್ರತಿ ಕಿ.ಮೀ.ಗೆ ಒಂದರಂತೆ 18 ಸಿಡಿ (ಚೆಕ್‌ ಡ್ಯಾಂ)ಗಳನ್ನು ₹ 14 ಕೋಟಿ ವೆಚಚ್ದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಲಾಗಿದೆ.

‘ಮಂಗಳವಾರ ಬಂದ ಮಳಿಗೆ ನಮ್ಮೂರಿನ ಹಳ್ಳಕ್ಕ ಕಟ್ಟಿದ ಡ್ಯಾಂ ತುಂಬೇತ್ರಿ. ಮಳಿ ಇಲ್ಲದ ಹಳ್ಳ ಖಾಲಿ ಆಗಿತ್ತು. ಈಗ ಡ್ಯಾಂ ತುಂಬಿದ್ದು ನಮ್ಗ ಭಾಳ ಅನುಕೂಲ ಆತ್ರೀ’ ಎಂದು ಬಟ್ಟೂರು ಗ್ರಾಮದ ರೈತ ಸೋಮನಗೌಡ ಪಾಟೀಲ ಖುಷಿಯಿಂದ ಹೇಳಿದರು.

‘ಈಗಾಗಲೇ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ 42 ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ಪ್ರತಿ ವರ್ಷ ಕ್ಷೇತ್ರದಲ್ಲಿ ಇಂತಹ 100 ಚೆಕ್‌ ಡ್ಯಾಂಗಳನ್ನು ಕಟ್ಟುವ ಗುರಿ ಹಾಕಿ ಕೊಂಡಿದ್ದೇನೆ’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.