ನರಗುಂದ: ‘ಮಹಾದಾಯಿ ನೀರು ಮಲಪ್ರಭೆಗೆ ಹರಿಯಲೇಬೇಕು. ಇದಕ್ಕಾಗಿ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರು ಯಾವುದೇ ಹೋರಾಟಕ್ಕೂ ಸಜ್ಜಾಗಿದ್ದಾರೆ. ಆದರೆ ರೈತರ ಆಸೆಯನ್ನು ನುಚ್ಚುನೂರು ಮಾಡಲು ರಾಜಕೀಯ ನಾಯಕರು ಪ್ರಯತ್ನಿಸುತ್ತಿರುವುದನ್ನು ಸಹಿಸುವು ದಿಲ್ಲ.
ನಮ್ಮ ಹೋರಾಟಕ್ಕೆ ಗೆಲುವು ಸಿಗುವವರೆಗೂ ಧರಣಿ ನಿಲ್ಲುವುದಿಲ್ಲ’ ಎಂದು ಮಹಾದಾಯಿ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್.ಬಿ. ಜೋಗಣ್ಣವರ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 674ನೇ ದಿನವಾದ ಶುಕ್ರವಾರ ಅವರು ಮಾತನಾಡಿದರು.
‘ಮಹಾದಾಯಿಗಾಗಿ ಪ್ರಾಣಕೊಡಲು ಸಿದ್ಧರಿದ್ದೇವೆ. ನಮ್ಮ ಹೋರಾಟಕ್ಕೆ ಈಗ ನ್ಯಾಯ ಲಭಿಸದಿದ್ದರೆ ಮುಂದಿನ ಪೀಳಿಗೆ ಯವರೂ ಧರಣಿ ಮುಂದುವರಿಸುತ್ತಾರೆ’ ಎಂದರು.
ಚಂದ್ರಗೌಡ ಪಾಟೀಲ ಮಾತನಾಡಿ ‘ರೈತರೆಂದರೆ ತೀವ್ರ ನಿರ್ಲಕ್ಷ ವಹಿಸುವ ರಾಜಕಾರಣಿಗಳಿಗೆ ಯಾವಾಗಲೂ ಚುನಾವಣೆ, ಅಧಿಕಾರದ ಆಸೆ.
ಚುನಾವಣೆ ವೇಳೆ ಹುಸಿ ಭರವಸೆ ನೀಡುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ನಿರಂತರ ನಡೆಯುತ್ತದೆ. ರೈತರೇ ರಾಷ್ಟ್ರದ ಬೆನ್ನೆಲುಬು ಎಂಬುದು ಕೇವಲ ಮಾತಾಗಿದೆ’ ಎಂದು ದೂರಿದರು.
ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ವಾಸು ಚವ್ಹಾಣ, ಈರಣ್ಣ ಗಡಗಿಶೆಟ್ಟರ, ಭೀಮಪ್ಪ ದಿವಟಗಿ, ಎಲ್.ಬಿ. ಮುನೇನಕೊಪ್ಪ, ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು, ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪ ಗುಡದೇರಿ, ಮೃತ್ಯುಂಜಯ ಹಿರೇಮಠ, ಎಸ್.ಕೆ.ಗಿರಿ ಯಣ್ಣವರ, ಚನ್ನಪ್ಪಗೌಡ ಪಾಟೀಲ , ಅನಸವ್ವ ಶಿಂಧೆ, ಬಸಮ್ಮ ಐನಾಪುರ ಸೇರಿದಂತೆ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.