ADVERTISEMENT

ನ್ಯಾಯಬೆಲೆ ಅಂಗಡಿ ಸ್ಥಳಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:18 IST
Last Updated 18 ಜುಲೈ 2017, 6:18 IST

ಮುಂಡರಗಿ: ಪಟ್ಟಣದ ಕೋಟೆ ಭಾಗದಲ್ಲಿ 1ನೇ ವಾರ್ಡಿನಲ್ಲಿದ್ದ ನ್ಯಾಯ ಬೆಲೆ ಅಂಗಡಿಯನ್ನು ಹಳೆ ಎಪಿಎಂಸಿ ಬಳಿ ಇರುವ 3ವಾರ್ಡಿಗೆ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿ ಪಟ್ಟಣದ 2, 3 ಹಾಗೂ 4ನೇ ವಾರ್ಡಿನ ಜನರು ಸೋಮವಾರ ತಹಶೀಲ್ದಾರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸ್ಥಳೀಯ ವಿಎಸ್‌ಕೆಎಸ್ ಸೊಸೈಟಿಯ ಮೂಲಕ ಪಟ್ಟಣದ 1 ಹಾಗೂ 3ನೇ ವಾರ್ಡ್‌ನಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಪಡಿತರವನ್ನು ವಿತರಿಸಲಾಗುತ್ತಿತ್ತು. ಪಡಿತರವನ್ನು ವಿತರಿಸಲು ಈಗ ಎಲ್ಲ ನ್ಯಾಯಬೆಲೆ ಅಂಗಡಿಗಳು ಕಂಪ್ಯೂಟರ್ ಹೊಂದುವುದು ಕಡ್ಡಾಯವಾಗಿದೆ.

1ಹಾಗೂ 3ನೇ ವಾರ್ಡುಗಳಲ್ಲಿ ಪ್ರತ್ಯೇಕ ಕಂಪ್ಯೂಟರ್‌ಗಳನ್ನು ನಿರ್ವಹಿಸಲು ಸಾಧ್ಯ ವಿಲ್ಲ ಎನ್ನುವ ಕಾರಣದಿಂದ ವಿಎಸ್‌ ಕೆಎಸ್ ಸೊಸೈಟಿಯ 3ನೇ ವಾರ್ಡಿನಲ್ಲಿ 1 ಕಂಪ್ಯೂಟರ್ ಇಟ್ಟು ಎರಡೂ ವಾರ್ಡುಗಳ ಪಡಿತರವನ್ನು ಅಲ್ಲಿಂದಲೇ ವಿತರಿಸುವುದಾಗಿ ಜನರಿಗೆ ತಿಳಿಸಿತು.

ADVERTISEMENT

ಇದರಿಂದ ಕೆರಳಿದ ಸಾರ್ವಜನಿಕರು ಮೊದಲಿನಂತೆ ಎಲ್ಲರಿಗೂ 1ನೇ ವಾರ್ಡಿನಲ್ಲಿಯೇ ಪಡಿತರವನ್ನು ವಿತರಿಸ ಬೇಕು ಎಂದು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.
‘ಕೋಟೆ ಭಾಗದ ಜನರಿಗೆ ಮೊದಲಿನಂತೆ 1ನೇ ವಾರ್ಡಿನಲ್ಲಿ ಪಡಿತರವನ್ನು ವಿತರಿಸಬೇಕು’ ಎಂದು ಮಂಜುನಾಥ ಇಟಗಿ, ಮಂಜುನಾಥ ಮುಧೋಳ ದೇವಪ್ಪ ಇಟಗಿ, ಚಂದ್ರ ಹಾಸ ಉಳ್ಳಾಗಡ್ಡಿ ಮೊದಲಾದವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ವಿಎಸ್‌ಕೆಎಸ್ ಸೊಸೈಟಿಯ ಅಧ್ಯಕ್ಷ ಬಸವಂತಪ್ಪ ಹೊಸಮನಿ, ಮ್ಯಾನೇಜರ್ ವಿಜಯಕುಮಾರ ಶಿಳ್ಳೀನ, ಕ್ಲಾರ್ಕ್ ನಾಡಗೌಡರ ಅವರನ್ನು ತಹಶೀಲ್ದಾರ್ ಕಚೇರಿಗೆ ಕರೆಯಿಸಿಕೊಂಡು  ತಹಶೀ ಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ ಹಾಗೂ  ನಾಗರಿಕ ಆಹಾರ ಪೂರೈಕೆ ಅಧಿಕಾರಿ ಸಾರಥಿ  ಚರ್ಚೆ ನಡೆಸಿದರು.

‘ಕಂಪ್ಯೂಟರ್ ಖರೀದಿಸಲು ಸೊಸೈಟಿಯಲ್ಲಿ ಹಣವಿಲ್ಲ, ಸದ್ಯ ಸರ್ಕಾರದಿಂದ ಬಂದಿರುವ ಪಡಿತರ ವಿತರಿಸುವ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಕೊಡಬಹುದು. ಒಂದು ತಿಂಗಳಿನ ಖರ್ಚು ವೆಚ್ಚವನ್ನು ಸೊಸೈಟಿಯಿಂದ ಭರಿಸಲಾಗುವುದು’ ಎಂದು ಸೊಸೈಟಿ ಅಧ್ಯಕ್ಷ ಬಸವಂತಪ್ಪ ಭರವಸೆ ನೀಡಿದರು.  ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ನೀಲಪ್ಪ ಚಿಕ್ಕಣ್ಣವರ, ಯಲ್ಲಪ್ಪ ಕುಕನೂರ, ಶಂಕರ ಉಳ್ಳಾಗಡ್ಡಿ, ಫಕ್ಕಿರಪ್ಪ ಬಳ್ಳಾರಿ, ಕಿಟ್ಟಪ್ಪ ಮೋರನಾಳ, ಉಮೇಶ ಬಳ್ಳಾರಿ, ತಿರುಕಪ್ಪ ರಾಮೇನಹಳ್ಳಿ, ಹನುಮಂತಪ್ಪ ಕಮ್ಮಾರ, ಈರಪ್ಪ ಸಬರದ, ಈಶಪ್ಪ ಜಂತ್ಲಿ, ರಾಜು ಉಳ್ಳಾಗಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.