ನರಗುಂದ: ‘ಮಹದಾಯಿಗಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಿದ್ದೇವೆ. ರೈತರೊಡನೆ ಚೆಲ್ಲಾಟವಾಡುತ್ತಿರುವ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸುತ್ತೇವೆ’ ಎಂದು
ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 843ನೇ ದಿನ ಶನಿವಾರ ಅವರು ಮಾತನಾಡಿದರು.
‘ಜನಪ್ರತಿನಿಧಿಗಳು ಏನೇ ಕುತಂತ್ರ ನಡೆಸಿದರೂ ನಾವು ಜಗ್ಗುವುದಿಲ್ಲ. ನೀರು ಬರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಪಾಲಿನ ನೀರು ನಮಗೆ ಸಿಗಲೇಬೇಕು. ಇಲ್ಲವಾದರೆ ಹೋರಾಟ ಇನ್ನಷ್ಟು ತೀವ್ರಗೊಳಿಸುತ್ತೇವೆ’ ಎಂದರು.
‘ಮೂರೂ ರಾಜ್ಯಗಳು ನ್ಯಾಯ ಮಂಡಳಿಯ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡುತ್ತಿಲ್ಲ. ರೈತರ ಹೋರಾಟಕ್ಕೂ ಬೆಲೆ ನೀಡುತ್ತಿಲ್ಲ’ ಎಂದು ಆರೋಪಿಸಿದರು.
‘ಮಹದಾಯಿ ನೀರು ನಮ್ಮ ಪಾಲಿನ ಹಕ್ಕು. ಅದನ್ನು ಕೊಡದಿದ್ದರಿಂದ ನರಗುಂದ ಬಂಡಾಯದ ಹಿಂದಿನ ಇತಿಹಾಸ ಮರುಕಳಿಸುತ್ತದೆ’ ಎಂದು ಉಪಾಧ್ಯಕ್ಷ ಪರಶುರಾಮ ಜಂಬಗಿ ಎಚ್ಚರಿಸಿದರು.
‘ಈ ಭಾಗದ ಜನರ ನೀರಿನ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ಮತ್ತೊಮ್ಮೆ ಕ್ರಾಂತಿಯ ಕಿಡಿ ಹೊತ್ತಿಸಬೇಕಾಗುತ್ತದೆ’ ಎಂದು ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್.ಬಿ.ಜೋಗಣ್ಣವರ ಹೇಳಿದರು. ಶ್ರೀಶೈಲ ಮೇಟಿ, ವೀರಣ್ಣ ಸೊಪ್ಪಿನ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರು, ಸಿದ್ದಪ್ಪ ಚಂದ್ರತ್ನವರ, ರಮೇಶ ನಾಯ್ಕರ, ಚನ್ನಪ್ಪಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.