ಶಿರಹಟ್ಟಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರು ಹೊಂದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ರೈತರನ್ನು ಋಣಮುಕ್ತ ಮಾಡಲಾಗುವುದು ಎಂದು ಬಿಜೆಪಿ ಸಂಸದ, ಮೊಳಕಾಲ್ಮುರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಭರವಸೆ ನೀಡಿದರು.
ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯವನ್ನು ಅಧೋಗತಿಗೆ ದೂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ನಂ. 1 ಆಗಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಕೊಲೆ ಆಗುತ್ತಿದೆ. ಮಹಿಳೆಯರು ಒಂಟಿಯಾಗಿ ಓಡಾಡುವುದೇ ಕಷ್ಟಕರವಾಗಿದೆ. ಇಂತಹ ಕೆಟ್ಟ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಲು ಕಾಲ ಸನ್ನಿಹಿತವಾಗಿದೆ ಎಂದರು.
ಕೌರವರ ಮತ್ತು ಪಾಂಡವರ ಯುದ್ದದಲ್ಲಿ ಕೊನೆಗೆ ಗೆಲ್ಲುವುದು ಪಾಂಡವರೇ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡುವುದಕ್ಕೆ ಕರ್ನಾಟಕ ಮಾತ್ರ ಬಾಕಿ ಇದೆ. ಅದಕ್ಕೆ, ಕೊನೆಯ ಮೊಳೆ ಹೊಡೆಯಬೇಕು ಎಂದು ಕರೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಹೆಸರನ್ನು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್, ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕುತಂತ್ರದಿಂದ ಸೋಲುಣಿಸಿದ್ದರು. ಅತ್ಯಂತ ಕೆಟ್ಟ ರಾಜಕೀಯ ಪಕ್ಷ ಎಂದರೆ ಕಾಂಗ್ರೆಸ್ ಎಂಬುದನ್ನು ಮರೆಯಬಾರದು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಅವರಿಗೆ ಆಶೀರ್ವದಿಸಿ ಕ್ಷೇತ್ರದಲ್ಲಿ ಹೊಸ ಮುನ್ನುಡಿ ಬರೆಯಬೇಕು ಎಂದು ಹೇಳಿದರು.
ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ, ಪಕ್ಷದ ಮಹಿಳಾ ಘಟಕ ಅಧ್ಯಕ್ಷ ಜ್ಯೋತಿ, ಕರಬಸಪ್ಪ ಹಂಚಿನಾಳ, ಡಾ. ವೈ.ಎಫ್. ಹಂಜಿ, ಚಂಬಣ್ಣ ಬಾಳಿಕಾಯಿ, ಅಶೋಕ ಪಲ್ಲೇದ, ವಿರೂಪಾಕ್ಷಗೌಡ ಅಣ್ಣಿಗೇರಿ ಹಾಗೂ ಹೇಮಗಿರೀಶ ಹಾವನಾಳ ಇದ್ದರು.
ಇದೇ ಸಂದರ್ಭದಲ್ಲಿ ಶಿಗ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಡಾ. ಆರ್.ಎನ್. ತೇಲಕರ, ಮಲ್ಲಪ್ಪ ಸೊರಟೂರ, ಬಸಣ್ಣ ಕಳಸದ,
ಸಿ.ಆರ್. ಗೋಕಾವಿ, ಶಂಕ್ರಪ್ಪ ಅಣ್ಣಿಗೇರಿ, ಈರಣ್ಣ ಕೆಲೂರ, ಪ್ರಭಯ್ಯ ನಂದಿಬೇವೂರಮಠ, ಆರ್.ಆರ್. ಗಡ್ಡದೇವರಮಠ ಹಾಗೂ ಬೆಳ್ಳಟ್ಟಿ ಅಂಬೇಡ್ಕರ್ ಸಂಘದ ಯುವಕರು ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.