ADVERTISEMENT

ಬೇಂದ್ರೆ ಜನಸಾಮಾನ್ಯರ ಕವಿ: ತಮ್ಮನಗೌಡ್ರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 7:14 IST
Last Updated 31 ಅಕ್ಟೋಬರ್ 2014, 7:14 IST

ಲಕ್ಷ್ಮೇಶ್ವರ: ‘ಜೀವನದಲ್ಲಿ ನೊಂದು ಬೆಂದು ಅದರಲ್ಲಿಯೇ ಬೆಳೆದು ಕಾವ್ಯ ರಚಿಸಿದ ವರಕವಿ ಡಾ.ದ.ರಾ. ಬೇಂದ್ರೆ­ಯವರು ಜನಸಾಮಾನ್ಯರ ಕವಿ ಆಗಿ­ದ್ದರು. ಅವರ ಕವನಗಳು ಜನಸಾಮಾ­ನ್ಯರ ಧ್ವನಿಯಾಗಿ ಇಂದಿಗೂ ಜನರ ಮನದಲ್ಲಿ ಉಳಿದುಕೊಂಡಿವೆ ಎಂದು ಸಾಹಿತಿ ಹಾಗೂ ರಾಮಗಿರಿಯ ವರಕವಿ ಡಾ.ದ.ರಾ.ಬೇಂದ್ರೆ ಸಾಹಿತ್ಯ ವೇದಿಕೆ  ಅಧ್ಯಕ್ಷ ಡಾ.ಎಸ್.ವಿ. ತಮ್ಮನಗೌಡ್ರ ಹೇಳಿದರು.

ಇಲ್ಲಿನ ಇಂದಿರಾನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೇಂದ್ರೆ ಸಂಸ್ಮರಣ ಕಾರ್ಯಕ್ರಮದಲ್ಲಿ ಬೇಂದ್ರೆ ಕಾವ್ಯ ಕುರಿತು ಉಪನ್ಯಾಸ ನೀಡಿದ ಅವರು, ಡಾ. ಬೇಂದ್ರೆಯವರು 3-4 ದಶಕಗಳ ಹಿಂದೆ ಅವರು ರಚನೆ ಮಾಡಿರುವ ಕವನಗಳು ಇಂದಿಗೂ ತಮ್ಮ ಘನತೆ­ಯನ್ನು ಉಳಿಸಿಕೊಂಡು ಅವರ ಹೆಸರನ್ನು ಅಜರಾಮರವಾಗಿ ಉಳಿಯು­ವಂತೆ ಮಾಡಿವೆ. ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರೀಜಿ ಕುರಿತು ಬರೆದಿರುವ ಕವನಗಳು ಹೊಸ ಲೋಕವನ್ನೇ ತೆರೆದಿಡುತ್ತವೆ. ಇಂದಿನ ಯುವ ಜನತೆ ಅವರ ಸಾಹಿತ್ಯವನ್ನು ತಪ್ಪದೆ ಓದಬೇಕು ಎಂದು ಸಲಹೆ ನೀಡಿದರು.

ಗದುಗಿನ ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಮಾತನಾಡಿ, ಬೇಂದ್ರೆಯವರ ಕವನಗಳು ನಿಗೂಢತೆ ಯಿಂದ ಕೂಡಿವೆ. ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಅವರ ಸಾಹಿತ್ಯದ ಕುರಿತು ವಿಮರ್ಶಕರು ಹೆಚ್ಚಿನ ಕೆಲಸ ಮಾಡಿಲ್ಲ. ಅವರು ಒಬ್ಬ ಶ್ರಾವಣ ಕವಿ, ಭಾವಕವಿ, ಮಕ್ಕಳ ಕವಿಯೂ ಆಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿನಂತೆ ಬೇಂದ್ರೆಯವರು ಬರೆಯದ ವಿಷಯವೇ ಇಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿ.ಎಂ. ಪೂಜಾರ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಬೇಂದ್ರೆಯವರ ಸಾಹಿತ್ಯದ ಚಿಂತನೆ ನಡೆಯಬೇಕಾದ ಅಗತ್ಯ ಇದ್ದು ಈ ನಿಟ್ಟಿನಲ್ಲಿ ಯುವ ಸಾಹಿತಿಗಳು ಊರೂರುಗಳಲ್ಲಿ ಬೇಂದ್ರೆ ಸಾಹಿತ್ಯದ ಪ್ರಚಾರಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕಥೆಗಾರ ನಾಗರಾಜ ಹಣಗಿ ಮಾತನಾಡಿದರು.

ಪ್ರಕಾಶ ಜೀರಂಕಳ್ಳಿ ಹಾಗೂ ಸೌಜನ್ಯ ತಮ್ಮನಗೌಡ್ರ ಬೇಂದ್ರೆ ರಚಿಸಿರುವ ಕವನಗಳನ್ನು ಹಾಡಿದರು.
ಸಾಹಿತಿ ಎಲ್.ಎಸ್. ಅರಳಹಳ್ಳಿ, ಕಲಾವಿದ ಕೆ.ಸಂತೋಷ, ಕವಯತ್ರಿ ಪ್ರಮಿಳಾ ಸಾಂಗ್ಲೀಕರ, ಎ.ಎಚ್. ಯಲವಗಿ, ಮಲ್ಲಿಕಾರ್ಜುನ ಕಳಸಾಪುರ, ಎ.ಐ. ಮಿಯಾನವರ, ಸೋಮು ಯತ್ನಳ್ಳಿ, ಐ.ಎನ್. ಹುಬ್ಬಳ್ಳಿ, ಶಿಕ್ಷಕ ಹಾಲಗುಂಡಿ ಮತ್ತಿತರರು ಹಾಜರಿದ್ದರು.

ಜೆ.ಎಸ್. ರಾಮಶೆಟ್ರ ಸ್ವಾಗತಿಸಿದರು. ವೇದಿಕೆ ಕಾರ್ಯದರ್ಶಿ ಎಸ್.ವಿ. ಕಮ್ಮಾರ ನಿರೂಪಿಸಿದರು. ಸೋಮು ಯತ್ನಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.