ADVERTISEMENT

ಮುಂದುವರಿದ ಮಾರುಕಟ್ಟೆ ‘ಬಂದ್’

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 6:28 IST
Last Updated 27 ಜುಲೈ 2017, 6:28 IST

ಗಜೇಂದ್ರಗಡ: ಇ– ಪಾವತಿಯನ್ನು ಪ್ರತಿಭಟಿಸಿ ಕೃಷಿ ಮಾರುಕಟ್ಟೆಯನ್ನು ಬಂದ್, ಬುಧವಾರ ನಡೆದ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ’ಬಂದ್’ ಮುಂದುವರಿದಿದೆ. ಇದರಿಂದ ಅನೇಕ ರೈತರು ಎಪಿಎಂಸಿ ಅಧ್ಯಕ್ಷರ ಕಾರಿಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಜಗಜ್ಯೋತಿ ಬಸವೇಶ್ವರ ಉಪ ಮಾರುಕಟ್ಟೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲರ ನೇತೃತ್ವದಲ್ಲಿ ಇಲ್ಲಿನ ವರ್ತಕರು ಮತ್ತು ರೈತರ ನಡುವೆ ಬಹಳಷ್ಟು ಕಾಲ ನಡೆದ ಸಮಾಲೋ ಚನಾ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಬಂದ್ ಮೂರನೆಯ ದಿನಕ್ಕೆ ಮುಂದುವರಿದಿದೆ.

ಸಭೆಯ ಆರಂಭದಲ್ಲಿ ಎಪಿಎಂಸಿ ಅಧ್ಯಕ್ಷ ವೀರಣ್ಣ ಶೆಟ್ಟರ, ವರ್ತಕರು ಹಾಗೂ ರೈತರ ಸಮನ್ವಯವನ್ನು ಕಾಪಾಡಿಕೊಂಡು ಹೋಗಬೇಕು, ರೋಣ ತಾಲ್ಲೂಕಿನಲ್ಲಿ ಹೆಚ್ಚು ಆದಾಯ ತರುವ ಈ ಮಾರುಕಟ್ಟೆ ಬಂದ್‌ದಿಂದ ನಲುಗಿದೆ ಎಂದು ಮಾತನಾಡಿದರು. ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ ಸಭೆಯಲ್ಲಿ ಮಾತನಾಡಿದರು.

ADVERTISEMENT

ಕೃಷಿ ಮಾರುಕಟ್ಟೆಯ ನಿರ್ದೇಶಕ ಚಾಮರಾಜ ಇದನ್ನು ಜಾರಿಗೊಳಿಸಲು 7 ಸಭೆಗಳನ್ನು ಮಾಡಿ ಹಂತಹಂತವಾಗಿ ಜಾರಿಗೊಳಸಲಾಗಿದೆ. ಮೊದಲಿನಂತೆ ರೈತರಿಗೆ ಮುಂಗಡ ಹಣ ಕೊಡುವುದಾದರೆ ಮನಿ ಲೆಂಡಿಂಗ್ ಲೈಸನ್ಸನ್ನು ಪಡೆದುಕೊಳ್ಳಿ ಎಂದರು.

ಇದರಿಂದ ಕೆರಳಿದ ರೈತರು ಗಲಾಟೆಯನ್ನು ಆರಂಭಿಸಿ, ’ಈಗ ಸಂತಿಗೆ ರೊಕ್ಕ ಇಲ್ಲ, ಬ್ಯಾಂಕ್ ಬಂದ್ ಆಗ್ಯಾವ ನಮಗ ರೊಕ್ಕ ಬೇಕು ಕೊಡ್ರಿ, ರೈತರನ್ನು ಸಾಯಬಡಿಬ್ಯಾಡ್ರಿ’’ ಎಂದು ರೈತರ ಪರವಾಗಿ  ಮುರಡಿ ಗ್ರಾಮದ ಉಮ್ಮಪ್ಪ ವಕ್ರ, ಚಿಕ್ಕಬನ್ನಿಗೊಳ ಗ್ರಾಮದ ಪರಸಪ್ಪ ಹಟ್ಟಿ, ರಾಜೂರ ಗ್ರಾಮದ ಗ್ರಾ.ಪಂ ಸದಸ್ಯ ಕಳಕಪ್ಪ ಹೂಗಾರ, ಬೈಲಪ್ಪ ಗುಳಗುಳಿ, ಬಸಪ್ಪ ಹೊಗರಿ, ಇಸ್ಮಾಯಿಲ್ ಮುಂತಾದವರು ಅಧಿಕಾರಿಗಳ ಧೋರ ಣೆಗೆ ಅವರನ್ನು ತರಾಟೆಗೆ ತೆಗೆದು ಕೊಂಡು ಅವರ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.