ಲಕ್ಷ್ಮೇಶ್ವರ: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಂದೆ, ತಾಯಿ ಕೂಲಿಗೆ ಹೋಗದಿದ್ದರೆ ಐದು ಜನರ ಹೊಟ್ಟೆ ತುಂಬುವುದೇ ಕಷ್ಟ. ಸಂಜೆಯಾದರೆ ಸಾಕು ಎಲ್ಲರ ಮನೆಯಲ್ಲಿ ವಿದ್ಯುತ್ ದೀಪಗಳು ಬೆಳಗುತ್ತವೆ.
ಆದರೆ ಚಿಕ್ಕ ಅಳತೆಯ ಆ ಮನೆಗೆ ವಿದ್ಯುತ್ ಸಂಪರ್ಕ ಕೂಡ ಇಲ್ಲ. ಚಿಮಣಿ ಬೆಳಕೇ ಆ ಮನೆಯವರಿಗೆ ಆಸರೆ. ಹೀಗೆ ಹತ್ತಾರು ಸಮಸ್ಯೆಗಳ ಮಧ್ಯೆಯೂ ರೇಣುಕಾ ಕಲ್ಲಳ್ಳಿ ದ್ವಿತೀಯ ಪಿಯುಸಿಯಲ್ಲಿ ಶೇ 85ರಷ್ಟು ಫಲಿತಾಂಶ ಪಡೆದಿದ್ದಾರೆ. ರೇಣುಕಾ ಇಲ್ಲಿಗೆ ಸಮೀಪದ ಶಿಗ್ಲಿ ಗ್ರಾಮದವರು.
ಕನ್ನಡಕ್ಕೆ 95, ಇಂಗ್ಲಿಷ್ 82, ಇತಿಹಾಸ 95, ಅರ್ಥಶಾಸ್ತ್ರ 93, ವ್ಯವಹಾರ ಅಧ್ಯಯನ 96 ಮತ್ತು ಲೆಕ್ಕಶಾಸ್ತ್ರದಲ್ಲಿ 97 ಅಂಕಗಳನ್ನು ಪಡೆದಿದ್ದಾಳೆ. ಮುಂದಿನ ಓದಿಗೆ ಕಾಡುತ್ತಿರುವ ಬಡತನ ಅಡ್ಡಿಯಾಗುತ್ತಿದೆ.
‘ಅವ್ವ, ಅಪ್ಪ ದುಡ್ಯಾಕ ಹೋಗದಿದ್ರ ನಡ್ಯಂಗಿಲ್ರೀ. ನನಗ ಸಿ.ಎ. (ಲೆಕ್ಕ ಪರಿಶೋಧಕರು) ಓದಬೇಕಂತ ಆಸೆ ಐತಿ. ಆದರ ಬಡತನದಾಗ ಹ್ಯಂಗ ಓದಬೇಕಂತ ಚಿಂತಿ ಶುರು ಆಗೇತ್ರಿ’ ಎಂದು ರೇಣುಕಾ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಹೇಳುತ್ತಾಳೆ.
ರೇಣುಕಾ ಬದುಕಿನ ಕನಸಿಗೆ ಸಹಾಯ ಮಾಡ ಬಯಸುವವರು ಬಾಲಕಿಯ ಶಿಗ್ಲಿಯ ಕೆನರಾ ಬ್ಯಾಂಕ್ನ ಉಳಿತಾಯ ಖಾತೆ ಸಂಖ್ಯೆ 05701010210200 ಈ ಖಾತೆಗೆ ಹಣ ಜಮೆ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.