ನರಗುಂದ: ‘ಜನಪ್ರತಿನಿಧಿಗಳು ರೈತರ ಸಮಸ್ಯೆ ಕಡೆಗಣಿಸಿದರೆ ಪರಿಣಾಮ ಎದುರಿಸಬೇಕಾದೀತು’ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರ ಬಸಪ್ಪ ಹೂಗಾರ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 979ನೇ ದಿನ ಮಂಗಳವಾರ ಅವರು ಮಾತನಾಡಿ, ‘ಮಹದಾಯಿ ವಿಷಯ ನ್ಯಾಯಮಂಡಳಿಯಲ್ಲಿದೆ. ನ್ಯಾಯಮಂಡಳಿ ಹೊರಗೆ ಇದನ್ನು ಇತ್ಯರ್ಥಪಡಿಸಲು ಪ್ರಯತ್ನಿಸಬೇಕಾದ ಜನಪ್ರತಿನಿಧಿಗಳು ಮೌನ ವಹಿಸಿರುವುದು ಸಲ್ಲದು. ಜನಪ್ರತಿನಿಧಿಗಳು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.
ಭರತಕುಮಾರ ಮೋರೆ ಮಾತನಾಡಿ, ‘ಕಾವೇರಿ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ಸರ್ಕಾರ ತೋರಿದ ಆಸಕ್ತಿ ಮಹದಾಯಿ ವಿಷಯದಲ್ಲಿ ಕಂಡುಬರುತ್ತಿಲ್ಲ. ಎಲ್ಲರೂ ಒಂದೊಂದು ರೀತಿಯಲ್ಲಿ ವರಸೆ ಬದಲಿಸುತ್ತಿದ್ದಾರೆ. ಯಾವ ಪಕ್ಷಕ್ಕೂ ಮಹದಾಯಿ ಯೋಜನೆ ಜಾರಿಯಾಗುವುದು ಬೇಕಿಲ್ಲ. ಮಹದಾಯಿ ನೀರು ಲಭಿಸುವ ತನಕ ನಾವು ಹೋರಾಟದಿಂದ ಕದಲುವುದಿಲ್ಲ’ ಎಂದು ಹೇಳಿದರು.
ಧರಣಿಯಲ್ಲಿ ಪರುಶರಾಮ ಜಂಬಗಿ, ವೆಂಕಪ್ಪ ಹುಜರತ್ತಿ, ಸೋಮಲಿಂಗಪ್ಪ ಆಯಟ್ಟಿ, ಚಂದ್ರಪ್ಪ ಮುದಕನ್ನವರ, ಚನ್ನಬಸು ಹುಲಜೋಗಿ, ಬಸಪ್ಪ ತೆಗ್ಗಿನಮನಿ,ಯಲ್ಲಪ್ಪ ಗುಡದೇರಿ, ಎಸ್.ಕೆ.ಗಿರಿಯಣ್ಣವರ ಧರಣಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.