ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಬೀಸಿದ ರಭಸದ ಮಳೆ– ಗಾಳಿಗೆ ಅನೇಕ ಮರಗಳು ಧರೆಗುರುಳಿದ್ದು ಮನೆಗಳ ತಗಡಿನ ಚಾವಣಿ ಹಾರಿ ಹೋಗಿದೆ. ಸಮೀಪದ ಪುಟಗಾಂವ್ ಬಡ್ನಿಯ ಹೆಗ್ಗಪ್ಪ ಕಮ್ಮಾರ ಅವರ ಕುಲುಮೆಗೆ ಹೊದಿಸಿದ್ದ ತಗಡುಗಳು ಹಾರಿ ದೂರಕ್ಕೆ ಹೋಗಿ ಬಿದ್ದಿದ್ದವು.
ಅಲ್ಲದೇ ಇದೇ ಗ್ರಾಮದಲ್ಲಿ ಐದಾರು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ ಅಲ್ಲದೆ ಅಡರಕಟ್ಟಿ–ಪುಟಗಾಂವ್ಬಡ್ನಿ ನಡುವೆ ಹೊಲ ಹಾಗೂ ರಸ್ತೆ ಬಳಿ ಬೆಳೆದಿದ್ದ ಹತ್ತಾರು ಮರಗಳು ನೆಲಕ್ಕುರುಳಿವೆ.
ಹಿರೇಮಲ್ಲಾಪುರದಲ್ಲಿ ನೀಲಪ್ಪ ಕರಿಯಪ್ಪ ರೇವಡಿ ಎಂಬುವವರ ಮನೆಯ ತಗಡುಗಳು ಕಿತ್ತು ಹೋಗಿ ಹಾನಿ ಸಂಭವಿಸಿದೆ. ಅಲ್ಲದೆ ಮನೆಯ ಕೊಠಡಿಯೊಂದರಲ್ಲಿ ಸಂಗ್ರಹಿಸಿದ್ದ ಹತ್ತಿ ಸಹ ಮಳೆಯಲ್ಲಿ ನೆನೆದಿದೆ.
ಅದರಂತೆ ಹುಲ್ಲೂರು ಗ್ರಾಮದಲ್ಲಿ ಬಸವಣ್ಣೆವ್ವ ಡೊಳ್ಳಿನ ಅವರ ಜಾನುವಾರು ಕಟ್ಟುವ ಶೆಡ್ನ ಚಾವಣಿಗೆ ಹಾಕಿದ್ದ ತಗಡುಗಳು ಕಿತ್ತು ಹೋಗಿವೆ.
‘ಇಂಥ ಅನಾಹುತ ಗಾಳೀನ ನಾ ಎಂದೂ ನೋಡಿಲ್ರೀ’ ಎಂದು ಪುಟಗಾಂವ್ಬಡ್ನಿ ಗ್ರಾಮದ ಶಿವಪುತ್ರಪ್ಪ ಜಿಡ್ಡಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.