ADVERTISEMENT

‘ವಿನಯ ಕುಲಕರ್ಣಿ ವರ್ಚಸ್ಸು ಹಾಳುಗೆಡವಲು ಬಿಜೆಪಿ ಹುನ್ನಾರ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 7:32 IST
Last Updated 28 ನವೆಂಬರ್ 2017, 7:32 IST

ಗದಗ: ‘ಸಚಿವ ವಿನಯ ಕುಲಕರ್ಣಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗವಹಿಸಿರುವುದರಿಂದ, ಅವರ ವರ್ಚಸ್ಸು ಹಾಳುಗೆಡವಲು ಬಿಜೆಪಿ ಹಾಗೂ ಬಿ.ಎಸ್. ಯಡಿಯೂರಪ್ಪ ಹುನ್ನಾರ ನಡೆಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ನರಗುಂದದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು, ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿನಯ ಕುಲಕರ್ಣಿ ಅವರ ಮೇಲಿರುವ ಆರೋಪದ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ಕುಲಕರ್ಣಿ ಅವರ ಮೇಲೆ ಏನಿದೆ ಆರೋಪ’ ಎಂದು ಪ್ರಶ್ನಿಸಿದ ಅವರು, ‘ಬಿಜೆಪಿಯವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇದರ ಜತೆಗೆ ಕೆಂಪಯ್ಯ ಅವರ ಹೆಸರನ್ನೂ ತಳಕು ಹಾಕಿದ್ದಾರೆ’ ಎಂದು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

ADVERTISEMENT

ದಯವಿಟ್ಟು ಆ ಕೆಲ್ಸಾ ಮಾಡ್ಸಪ್ಪಾ: ‘ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ ಮಹದಾಯಿ ವಿವಾದ ಇತ್ಯರ್ಥವಾಗಲು ಸಾಧ್ಯ. ಸಂಧಾನಕ್ಕಾಗಿ ಈಗಾಗಲೇ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ. ಆದರೆ, ಬಿಜೆಪಿಯವರು ಮುಂದೆ ಬರುತ್ತಿಲ್ಲ. ಮೂರು ವರ್ಷಗಳಿಂದ ಸುಮ್ಮನಿದ್ದ ಯಡಿಯೂರಪ್ಪ, ಈಗ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಿ, ನೀರು ಹರಿಸುವುದಾಗಿ ಹೇಳಿದ್ದಾರೆ’ ಎಂದ ಸಿದ್ದರಾಮಯ್ಯ, ‘ಯಡಿಯೂರಪ್ಪ ನಿನ್ನ ಕೈ ಮುಗಿತೀನಿ, ದಯವಿಟ್ಟು ಆ ಕೆಲ್ಸಾ ಮಾಡ್ಸಪ್ಪಾ’ ಎಂದು ತಿವಿದರು.

‘ಕಾಂಗ್ರೆಸ್‌ನ ಕೆಲವು ಶಾಸಕರು, ಸಚಿವರು ಬಿಜೆಪಿ ಅಥವಾ ಜೆಡಿಎಸ್ ಸೇರ್ಪಡೆಯಾಗುವುದು ಸುಳ್ಳು. ಕೆಲ ಬಿಜೆಪಿ ಶಾಸಕರೇ ನನ್ನ ಸಂರ್ಪಕದಲ್ಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.