ADVERTISEMENT

‘ಸಕಾಲಕ್ಕೆ ಸಾಲ ಮರುಪಾವತಿಸಿ’

ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಎ.ಎಂ.ಗೌಡರ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 9:33 IST
Last Updated 1 ಆಗಸ್ಟ್ 2015, 9:33 IST

ಗದಗ: ಠೇವಣಿದಾರರು ಹಾಗೂ ಷೇರುದಾರರು ಸಹಕಾರಿ ಬ್ಯಾಂಕ್‌ಗಳ ಜೀವಾಳವಾಗಿದ್ದು, ಸಕಾಲಕ್ಕೆ ಸಾಲ ಮರುಪಾವತಿಸಿದಾಗ ಮಾತ್ರ ಸಹಕಾರಿ ಸಂಘ, ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜ್ಯೋತಿ ಪತ್ತಿನ ಸೌಹಾರ್ದ ಸಹಕಾರಿ  ಸಂಘದ ಅಧ್ಯಕ್ಷ ಎ.ಎಂ.ಗೌಡರ ಹೇಳಿದರು.

ನಗರದ ಜ್ಯೋತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘ, ಸಂಸ್ಥೆಗಳ ಪ್ರಗತಿಗೆ ನಿರ್ದೇಶಕರು ಹಾಗೂ ಸದಸ್ಯರು ಸಹಕಾರ ನೀಡಬೇಕು. ಸಂಘ ಆರ್ಥಿಕವಾಗಿ ಸಬಲತೆ ಸಾಧಿಸುವ ಮೂಲಕ ಲಾಭ ಗಳಿಸುತ್ತಿದೆ. ಈ ವರ್ಷ ಸಾಲ ಪಡೆದವರು ಸರಿಯಾದ ಸಮಯಕ್ಕೆ ಮರು ಪಾವತಿಸದ ಕಾರಣ ಲಾಭಾಂಶ ಶೇ.10ಕ್ಕೆ ಕುಸಿದಿದೆ. ಸಾಲ ಮರುಪಾವತಿ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಘದ ಹಿರಿಯ ನಿರ್ದೇಶಕ ಚಂದ್ರಶೇಖರಪ್ಪ ಬಡ್ನಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘ ಸ್ವಂತ ಕಟ್ಟಡ ಹೊಂದುವ ಮೂಲಕ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು. ಸಂಘದ ಉಪಾಧ್ಯಕ್ಷ ಅಮರಪ್ಪ ಕಿರೇಸೂರ, ಪ್ರಭಾರ ವ್ಯವಸ್ಥಾಪಕ ಎಸ್.ಎಂ.ಸರ್ವಿ ಅವರು ಬ್ಯಾಂಕಿನ ಪ್ರಗತಿ ಕುರಿತು ವಾರ್ಷಿಕ ವರದಿ, ಲಾಭ, ಆಸ್ತಿ ಸಾಲ, ಠೇವಣಿ, ಶೇರು ಬಂಡವಾಳದ ಅಂಕಿ ಅಂಶ ವಿವರಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.95 ಅಂಕ ಗಳಿಸಿದ ವಿದ್ಯಾರ್ಥಿನಿ ಜ್ಯೋತಿ ಹುಣಶಿಕಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ನಿರ್ದೇಶಕ ಅಶೋಕ ಲಕ್ಕುಂಡಿ, ಎಸ್.ಎಂ.ಬ್ಯಾಳಿ, ಐ.ಎಂ.ಕಿರೇಸೂರ, ಶಿವಪ್ಪ ಗೆದಿಗೇರಿ, ಭರಮಪ್ಪ ವಡ್ಡರ ಹಾಜರಿದ್ದರು.

ಠೇವಣಿದಾರರಿಗೆ ಹಾಗೂ ಷೇರುದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಹಲವು ಯೋಜನೆ  ರೂಪಿಸಲಾಗುತ್ತಿದೆ. - ಎ.ಎಂ.ಗೌಡರ, ಅಧ್ಯಕ್ಷ, ಜ್ಯೋತಿ ಪತ್ತಿನ ಸಹಕಾರಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.