ADVERTISEMENT

ಪುಟ್ಟಣ್ಣಯ್ಯ ಕೊಡುಗೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 9:39 IST
Last Updated 20 ಫೆಬ್ರುವರಿ 2018, 9:39 IST

ನರಗುಂದ: ‘ಮಹದಾಯಿ ಸೇರಿದಂತೆ ರಾಜ್ಯದ ಎಲ್ಲ ರೈತ ಹೋರಾಟಗಳಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಅವರು ಮುಂಚೂಣಿಯಲ್ಲಿ ಇರುತ್ತಿದ್ದರು. ರೈತರ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯರು ಸೋಮವಾರ ಇಲ್ಲಿ 950ನೇ ದಿನದ ಮಹದಾಯಿ ಧರಣಿ ವೇದಿಕೆಯಲ್ಲಿ ಕಂಬನಿ ಮಿಡಿದರು.

‘ಪುಟ್ಟಣ್ಣಯ್ಯ ಅವರು ರಾಜ್ಯ, ಕೇಂದ್ರ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದರು. ನರಗುಂದದ ರೈತರ ಹೋರಾಟದಿಂದಲೂ ಪ್ರೇರಿತರಾದ ಅವರು ಅಖಂಡ ಕರ್ನಾಟಕದ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡಿದ್ದರು. ಅವರು ಇನ್ನಷ್ಟು ದಿನ ಇರಬೇಕಿತ್ತು. ಅವರ ಅಗಲುವಿಕೆಯಿಂದ ರೈತ ಸಮುದಾಯ ಅನಾಥವಾಗಿದೆ. ಇಂತಹ ಅಪ್ರತಿಮ ಹೋರಾಟಗಾರರಿಂದ ಮಾತ್ರ ರಾಜಕಾರಣಿಗಳನ್ನು ಎದುರಿಸಲು ಸಾಧ್ಯವಾಗಿತ್ತು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಬಳೆ ಹೇಳಿದರು

ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತ ನಾಡಿ, ‘ಮಹದಾಯಿ ಹೋರಾಟದ ವೇದಿಕೆಗೆ ಆಗಮಿಸಿ ರೈತರಲ್ಲಿ ಹುರುಪು ತುಂಬಿ ಹೋರಾಟ ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಿದ್ದ ಪುಟ್ಟಣ್ಣಯ್ಯ ಅವರು ರೈತರ ಆಶಾಕಿರಣವಾಗಿದ್ದರು’ ಎಂದು ಹೇಳಿದರು.

ADVERTISEMENT

‘ಮಹದಾಯಿ ಹೋರಾಟ ಸಮಿತಿ ಸದಸ್ಯ ಶ್ರೀಶೈಲ ಮೇಟಿ ಮಾತನಾಡಿ, ‘ಕೆ.ಎಸ್‌.ಪುಟ್ಟಣ್ಣಯ್ಯ ಅವರ ನಿಧನ ರೈತ ಸಮುದಾಯಕ್ಕೆ ತೀವ್ರ ಹಾನಿ ಉಂಟು ಮಾಡಿದೆ’ ಎಂದರು.

ಧರಣಿಯಲ್ಲಿ ಶಹರ ರೈತ ಸಂಘದ ಅಧ್ಯಕ್ಷ ವಿಠ್ಠಲ ಜಾಧವ, ಚಂದ್ರಗೌಡ ಪಾಟೀಲ, ರಮೇಶ ನಾಯ್ಕರ, ಹನಮಂತ ಸರನಾಯ್ಕರ, ಚನ್ನಪ್ಪಗೌಡ ಪಾಟೀಲ, ವೆಂಕಪ್ಪ ಹುಜರತ್ತಿ, ವೀರಣ್ಣ ಸೊಪ್ಪಿನ, ಎಸ್‌.ಬಿ.ಜೋಗಣ್ಣವರ, ಕಾಡಪ್ಪ ಕಾಕನೂರು ಹಾಗೂ ಹೋರಾಟ ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.