ADVERTISEMENT

ಅಪಘಾತ ತಪ್ಪಿಸಲು ಆಗ್ರಹ; ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 11:04 IST
Last Updated 26 ಏಪ್ರಿಲ್ 2018, 11:04 IST

ಅರಕಲಗೂಡು: ತಾಲ್ಲೂಕಿನ ಹುಲಿಕಲ್- ಬರಗೂರು ತಿರುವಿನಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿಸಿ ಪ್ರಯಾಣಿಕರ ಜೀವ ಉಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಮಂಗಳವಾರ ಸಂಜೆ ದಿಢೀರ್ ರಸ್ತೆ ತಡೆ ನಡೆಸಿದರು.

ಬರಗೂರು- ಹುಲಿಕಲ್ ಕಡೆಯಿಂದ ಎದುರು ಬದುರಾಗಿ ಬರುತ್ತಿದ್ದ  ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಒಬ್ಬರಿಗೆ ತೀವ್ರ ಗಾಯಗಳಾಗಿತ್ತು. ಎರಡು ದಿನಗಳ ಹಿಂದೆ ಇದೇ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿತ್ತು. ಇದು ಅರಕಲಗೂಡು, ಕೊಣನೂರು, ಹಾಗೂ ಬರಗೂರು- ಹುಲಿಕಲ್ ಸಂದಿಸುವ ರಸ್ತೆಯಾಗಿದ್ದು ಪಕ್ಕದಲ್ಲಿರುವ ತಂಗುದಾಣ ನಿರ್ಮಿಸಿದಾಗಿನಿಂದ ಎದುರು ಬರುತ್ತಿರುವ ವಾಹನಗಳು ಕಾಣುತ್ತಿಲ್ಲ. ರಸ್ತೆಗೆ ಹಂಪ್ಸ್‌ಗಳನ್ನು ನಿರ್ಮಿಸಿಲ್ಲ. ಇದರಿಂದ ಅಪಘಾತಗಳಾಗುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೊಣನೂರು ಪೊಲೀಸರು ಸ್ಥಳಕ್ಕೆ ಧಾವಿಸಿ, ರಸ್ತೆಗೆ ಉಬ್ಬುಗಳನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆ ಗಮನಕ್ಕೆ ತರಲಾಗಿದೆ ಎಂದು ಜನರನ್ನು ಸಮಾಧಾನಪಡಿಸಿದ ನಂತರ ಪ್ರತಿಭಟನೆ ಹಿಂಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.