ADVERTISEMENT

ಆರ್‌ಟಿಇ ತಾರತಮ್ಯ; ಪೋಷಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:16 IST
Last Updated 20 ಏಪ್ರಿಲ್ 2017, 7:16 IST

ಹಾಸನ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ 25 ಮಕ್ಕಳನ್ನು ಅಂಗಸಂಸ್ಥೆಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

2012–13ರಿಂದ 2016ರವರೆಗೆ ಕೆ.ಆರ್.ಪುರಂನಲ್ಲಿರುವ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರ್‌ಟಿಇ ಕಾಯ್ದೆಯಡಿ 79 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ, ಪ್ರಸಕ್ತ ಸಾಲಿನಿಂದ ಶಾಲೆಯನ್ನು ಚಿಕ್ಕಹೊನ್ನೆನಹಳ್ಳಿಗೆ ವರ್ಗಾಯಿಸಿ ಅಲ್ಲಿ 54 ಮಕ್ಕಳಿಗೆ ಮಾತ್ರ ಪ್ರವೇಶ ಅವಕಾಶ ನೀಡಿದ್ದಾರೆ.

ಒಂದನೇ ತರಗತಿ ನಂತರದ ಮಕ್ಕಳಿಗಷ್ಟೇ ಆರ್‌ಟಿಇ ಅನ್ವಯವಾಗುತ್ತಿದ್ದು, ಯುಕೆಜಿಗೆ ಸೇರ ಬಯಸುವವರು ಪ್ರತಿ ಮಗುವಿಗೆ ₹16 ಸಾವಿರ ಪ್ರವೇಶ ಶುಲ್ಕ ಪಾವತಿಸುವಂತೆ ಹೇಳುತ್ತಿದ್ದಾರೆ. ಕೆ.ಆರ್‌.ಪುರಂ ನಲ್ಲಿದ್ದಾಗ  ಆರ್‌ಟಿಇ ಅಡಿ ಉಚಿತ ವಿದ್ಯಾಭ್ಯಾಸ ಮಾಡಿದ ಮಗುವಿಗೆ ಈಗ ಶುಲ್ಕ ಪಾವತಿಸುವುದು ಏಕೆ ಎಂದು ಪ್ರಶ್ನಿಸಿದರು.

ADVERTISEMENT

ಸರ್ಕಾರ ಶುಲ್ಕ ಪಾವತಿಸುತ್ತದೆ ಎಂಬ ಕಾರಣದಿಂದಲೇ ಆರ್‌ಟಿಇ ಅಡಿ ಮಕ್ಕಳನ್ನು ಶಾಲೆಗೆ ದಾಖಲಿಸಿದ್ದೇವೆ. ಆದರೆ, ಶಿಕ್ಷಣ ಸಂಸ್ಥೆ ಪ್ರವೇಶ ಶುಲ್ಕ ಪಾವತಿಸುವಂತೆ ಹೇಳುತ್ತಿದೆ. ವಾಹನ ದಟ್ಟಣೆ, ಕಟ್ಟಡ ಕೊರತೆ ಹಾಗೂ ನೀರಿನ ಸಮಸ್ಯೆಗಳ ನೆಪವೊಡ್ಡಿ ವರ್ಗಾವಣೆಗೆ ಮುಂದಾಗಿದೆ. ಹಣದ ಆಮಿಷಕ್ಕೆ ಶಿಕ್ಷಣ ಸಂಸ್ಥೆ ಹಾಗೂ ಅಧಿಕಾರಿಗಳು ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಚರ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಾಂತರಾಜು ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಪೋಷಕರ ಕಣ್ಣು ತಪ್ಪಿಸಿ ಸುತ್ತಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಗೂ ದೂರು ಸಲ್ಲಿಸಲಾಗಿದೆ. ಈಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.