ADVERTISEMENT

ಕಂದಾಯ ಕಟ್ಟಿಲ್ಲ ಎಂದು ಎಲ್‌ಪಿಜಿ ಸಂಪರ್ಕ ವಿಳಂಬ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 9:37 IST
Last Updated 2 ಡಿಸೆಂಬರ್ 2017, 9:37 IST

ಆಲೂರು: ಪರಿಶಿಷ್ಟ ಜಾತಿ, ಪಂಗಡದ ಅನುದಾನದಡಿ ಫಲಾನುಭವಿಗಳಿಗೆ ಕಂದಾಯ ಪೂರ್ತಿ ಪಾವತಿಸಿಲ್ಲ ಎಂದು ಅಡುಗೆ ಅನಿಲ ಸಂಪರ್ಕ ನೀಡದ ಕುರಿತು ಪಟ್ಟಣ ಪಂಚಾಯಿತಿ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಸದಸ್ಯ ಶಿವಣ್ಣ ಅಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರಿಂದ ಕೇವಲ ಹೆಸರಿಗೆ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಿದ್ದರೂ, ಇದುವರೆಗೂ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಸದಸ್ಯರು ಆರೋಪಿಸಿದರು. ‘ಯಾರು ಕಂದಾಯ ಕಟ್ಟಿಲ್ಲ ಎಂಬುದರ ಬಗ್ಗೆ ಆಯಾ ವಾರ್ಡ್ ಸದಸ್ಯರಿಗೆ ವಿವರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ನಗರದಲ್ಲಿ ಶೌಚಾಲಯ ಹೊಂದಿಲ್ಲದವರಿಗೆ ಕಟ್ಟಿಸಿಕೊಳ್ಳುವಂತೆ ಮನವೊಲಿಸಬೇಕು ಎಂದರು. ‘ಪಟ್ಟಣದ ಮ್ಯಾಪ್ ಪಟ್ಟಣ ಪಂಚಾಯಿತಿಯಲ್ಲಿ ಇಲ್ಲ’ ಎಂದು ಮುಖ್ಯಾಧಿಕಾರಿ ಹೇಳಿದರು. ಇದಕ್ಕೆ ಡಿ.ಎಸ್.ಜಯಣ್ಣ ಹಾಗೂ ಇತರ ಸರ್ವಸದಸ್ಯರು ತರಾಟೆಗೆ ತೆಗೆದುಕೊಂಡರು.

ಬೀದಿ ನಾಯಿ ಹಾವಳಿ ತಪ್ಪಿಸಲು ಸದಸ್ಯರಾದ ನಾಗರತ್ನಾ ಹಾಗೂ ಶಿವರಾಮೇಗೌಡ ಕೋರಿದರು. ‘ಬೀದಿ ನಾಯಿ ಹಿಡಿಯಲು ಹಣವಿಲ್ಲ’ ಎಂದು ಮುಖ್ಯಾಧಿಕಾರಿ ಅವರು ಹೇಳಿಕೆ ನೀಡಿದ್ದು, ಸದಸ್ಯರಲ್ಲಿ ನಗೆ ಉಕ್ಕಿಸಿತು.

‘ಹೌಸಿಂಗ್ ಬೋರ್ಡ್‌ ಕಾಲೊನಿಯಲ್ಲಿ ಅಂಗನವಾಡಿ ಸ್ಥಾಪಿಸಲು ನಿವೇಶನ ನೀಡಿದ್ದರೂ ಕ್ರಮಕೈಗೊಂಡಿಲ್ಲ. ಪುರಸಭೆಯಲ್ಲಿ ನಡೆಯುವ ಕಾರ್ಯಕ್ರಮದ ವಿಚಾರ ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು’ ಎಂದು ಹೇಳಿದರು.

ಕಸ ವಿಲೇವಾರಿ ಉದ್ದೇಶಕ್ಕಾಗಿ ತಂದಿರುವ ಟ್ರೈಲರ್‌ಗಳು ಬಳಕೆಯಾಗದೇ ನಿಂತಲ್ಲಿಯೇ ನಿಂತಿವೆ. ಇವುಗಳ ಬಳಕೆಗೆ ಅಧಿಕಾರಿಗಳು ಏಕೆ ಕ್ರಮಕೈಗೊಂಡಿಲ್ಲ, ಸಕ್ಕಿಂಗ್ ಮಷೀನ್‌ ಎಲ್ಲಿ ಬಳಕೆಯಾಗುತ್ತಿದೆ. ಇದರಿಂದ ಎಷ್ಟು ಆದಾಯ ಬಂದಿದೆ ಎಂಬುದರ ಬಗ್ಗೆ ಸಭೆಗೆ ವಿವರ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಾಧಿಕಾರಿ ಕೃಷ್ಣಮೂರ್ತಿ ಅವರು, ಸರ್ಕಾರದ ಆದೇಶದಂತೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಲು ಎಸ್.ಎಫ್.ಸಿ ಅನುದಾನ ಬಳಕೆ ಮಾಡಿಕೊಳ್ಳಬೇಕು ಸ್ವಚ್ಛ ಸರ್ವೇಕ್ಷಣ 2018ರ ಬಗ್ಗೆ ಸಭೆಗೆ ವಿವರಿಸಿದರು.

ಪ.ಪಂ ಉಪಾಧ್ಯಕ್ಷ ಟಿ.ಕೆ ಮಂಜುನಾಥ್, ಸದಸ್ಯರಾದ ಶಿವಣ್ಣ, ಡಿ.ಎಸ್ ಜಯಣ್ಣ, ನಂದೀಶ್, ಗಂಗಾಧರ್, ರತ್ನಮ್ಮ, ನಾಗರತ್ನಾ, ನೀಲೂಫರ್, ಜಾಫರ್ , ಎಂಜಿನಿಯರ್ ಕೇಶವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.