ಹಾಸನ: 'ನಿನ್ನೆಯಷ್ಟೇ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಹಂತ ಹಂತವಾಗಿ ರಾಜ್ಯ ಪ್ರವಾಸ ಮಾಡುವೆ. ಪಕ್ಷ ಸಂಘಟನೆಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕರಾದ ಎಚ್.ಡಿ. ದೇವೇಗೌಡ ಅವರು, ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಸಲಹೆ ಸೂಚನೆ ಕೊಟ್ಟಿದ್ದಾರೆ. ಕಿರಿಯ ವಯಸ್ಸಿನಲ್ಲಿ ಇದು ನನಗೆ ದೊಡ್ಡ ಜವಾಬ್ದಾರಿ’ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರು ಬೇಲೂರಿನಲ್ಲಿ ಹೇಳಿದ್ದಾರೆ.
ನೂತನ ಜವಾಬ್ದಾರಿ ನಂತರ ಮೊದಲ ಬಾರಿಗೆ ಬೇಲೂರಿಗೆ ಭೇಟಿ ನೀಡಿದ್ದ ಪ್ರಜ್ವಲ್ ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ‘ದೇವೇಗೌಡರು ನನ್ನನ್ನು ಗುರುತಿಸಿರುವುದು ನನಗೆ ಸಂತೋಷವಾಗಿದೆ. ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುವೆ. ಅವರು ಕೊಟ್ಟಿರುವ ಜವಾಬ್ದಾರಿಗೆ ನ್ಯಾಯ ಒದಗಿಸುವೆ. ಮುಂದಿನ ಚುನಾವಣೆ ಸ್ಪರ್ಧೆ ಬಗ್ಗೆ ಏನೂ ಮಾತನಾಡಲ್ಲ. ಪಕ್ಷದ ನಾಯಕರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ಅವರ ನಿರ್ಧಾರವೇ ಅಂತಿಮ. ಕುಮಾರಣ್ಣ ವಿಕಾಸ ಯಾತ್ರೆಗೆ ಅಭೂತಪೂರ್ವ ಜನ ಬೆಂಬಲ ಸಿಕ್ಕಿದೆ. ಕುಮಾರಣ್ಣ ಮುಂದಿನ ಸಿಎಂ ಆಗಬೇಕು ಎಂಬುದು ಜನರ ಆಸೆಯಾಗಿದೆ’ ಎಂದರು.
’ರಾಜ್ಯದ ಜನರ ಸಂಕಷ್ಟಗಳಿಗೆ ರಾಷ್ಟ್ರೀಯ ಪಕ್ಷಗಳು ಸ್ಪಂದಿಸಿಲ್ಲ’ ಎಂದು ಆರೋಪಿಸಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರಿಗೆ ಡಿಸಿಎಂ ಸ್ಥಾನ ಎಂದು ಹೆಚ್ಡಿಕೆ ಹೇಳಿಕೆ ಬೆಂಬಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.