ADVERTISEMENT

ಗಮನಸೆಳೆದ ಕೈಗಾರಿಕಾ ವಸ್ತುಪ್ರದರ್ಶನ

ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ, ರೈತರಿಗೆ ಕೃಷಿ ಮಾಹಿತಿ

ಕೆ.ಎಸ್.ಸುನಿಲ್
Published 6 ಫೆಬ್ರುವರಿ 2017, 5:48 IST
Last Updated 6 ಫೆಬ್ರುವರಿ 2017, 5:48 IST
ಹಾಸನದ ನಗರಸಭೆ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯುತ್ತಿರುವ ಕೈಗಾರಿಕಾ ಮತ್ತು ಕೃಷಿ ವಸ್ತುಗಳ ಪ್ರದರ್ಶನ
ಹಾಸನದ ನಗರಸಭೆ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯುತ್ತಿರುವ ಕೈಗಾರಿಕಾ ಮತ್ತು ಕೃಷಿ ವಸ್ತುಗಳ ಪ್ರದರ್ಶನ   

ಹಾಸನ: ಹೊಸ ವಿನ್ಯಾಸದ ಟ್ರ್ಯಾಕ್ಟರ್‌ಗಳು, ಕಾರು, ಕೃಷಿ ಯಂತ್ರೋಪಕರಣಗಳು, ಬಣ್ಣ  ಬಣ್ಣದ ಆಟಿಕೆಗಳು, ವಸ್ತ್ರದ ಮಳಿಗೆಗಳು..
ಹೀಗೆ ವಿವಿಧ ಮಾದರಿಯ ವಸ್ತುಗಳ ಪ್ರದರ್ಶನ ನಗರಸಭೆ ವತಿಯಿಂದ ಆಯೋಜಿಸಿರುವ 65ನೇ ಕೈಗಾರಿಕಾ ಮತ್ತು ಕೃಷಿ ವಸ್ತುಗಳ ಪ್ರದರ್ಶನದಲ್ಲಿ ಗಮನ ಸೆಳೆಯಿತು.

ತಿಂಗಳ ಹಿಂದೆಯಷ್ಟೇ ಆಯೋಜಿಸಿದ್ದ ಇತಿಹಾಸ ಪ್ರಸಿದ್ಧ ದನಗಳ ಜಾತ್ರಾ ಮಹೋತ್ಸವ ಯಶಸ್ಸಿನ ಬಳಿಕ ಸ್ಥಗಿತಗೊಂಡಿದ್ದ ಕೈಗಾರಿಕಾ ಮತ್ತು ಕೃಷಿ ವಸ್ತುಗಳ ಪ್ರದರ್ಶನವನ್ನು ನಗರಸಭೆ ವಸ್ತುಪ್ರದರ್ಶನ ಮೈದಾನದಲ್ಲಿ ಜ. 26ರಿಂದ ಆರಂಭಿಸಲಾಗಿದೆ. ಹಿರಿಯರಿಗೆ, ಯುವಕರಿಗೆ, ಮಕ್ಕಳಿಗೆ ಮನರಂಜಿ
ಸಲು ಆಟಗಳನ್ನು ಪರಿಚಯಿಸಲಾಗಿದೆ.

ಕೃಷಿ ಯಂತ್ರೋಪಕರಣಗಳು, ಕೈ ಪಿಡಿಗಳು, ಸಾಲ ನೀಡುವ ಬ್ಯಾಂಕ್‌ಗಳ ಕೌಂಟರ್‌, ಹಣ್ಣು ಹಂಪಲು ಹೀಗೆ ವಿವಿಧ ಬಗೆಯ ಕೌಂಟರ್‌ಗಳು ಆಕರ್ಷಿಸಿದವು. ಹಾಸನ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ  (ಹಾಮೂಲ್‌), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳ ಸವಲತ್ತು ಹೇಳುವ ಸ್ಟಾಲ್‌ಗಳು ಇದ್ದವು.

ಬೆಂಗಳೂರಿನ ಫನ್‌ ವರ್ಲ್ಡ್‌ ಸಂಸ್ಥೆಯವರು ₹ 11.65 ಲಕ್ಷಕ್ಕೆ ಇದನ್ನು ಗುತ್ತಿಗೆ ಪಡೆದುಕೊಂಡಿದ್ದಾರೆ. ಆಟೊ ಮೊಬೈಲ್‌, ಎಲೆಕ್ಟ್ರಿಕಲ್‌ ಉಪಕರಣ, ಅಲಂಕಾರಿಕ ಮತ್ತು ಗೃಹ ಬಳಕೆ ವಸ್ತುಗಳು, ಕೈ ಮಗ್ಗದ ಬಟ್ಟೆಗಳು, ಮ್ಯೂಸಿಯಂ, ಪಾದರಕ್ಷೆ, ಗಿಫ್ಟ್‌, ಪರ್ಸ್‌ಗಳು, ಅಕ್ವೇರಿಯಂ ಪ್ರಮುಖ ಆಕರ್ಷಣೆಯಾಗಿವೆ.

ಕೆಲ ವಸ್ತುಗಳಿಗೆ ರಿಯಾಯಿತಿಯೂ ಉಂಟು. ಅಲ್ಲದೇ ಮಕ್ಕಳನ್ನು ಮನರಂಜಿಸಲು ವಿಶೇಷವಾಗಿ ಜಾಯಿಂಟ್‌ ವಿಲ್‌, ಮಿನಿ ಟ್ರೈನ್‌, ಬೋಟಿಂಗ್, ಹೆಲಿಕಾಪ್ಟರ್‌ ಹಾಕಲಾಗಿದೆ.

ಫೆ. 26ರ ವರೆಗೂ ಪ್ರದರ್ಶನ ಇದ್ದು, ಪ್ರತಿದಿನ ಸಂಜೆ 6 ರಿಂದ ರಾತ್ರಿ 10.30ರ ವರೆಗೆ ಭೇಟಿ ನೀಡಲು ಅವಕಾಶ ಇದೆ. ಟಿಕೆಟ್‌ ದರ ₹ 30. ಶನಿವಾರ ಮತ್ತು ಭಾನುವಾರ ಹೆಸರಾಂತ ಕಲಾವಿದರು ಹಾಗೂ ಚಿತ್ರ ನಟರು ಶಾಂತಲ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ. 

‘ಪ್ರಜಾವಾಣಿ’ ಜತೆ ಮಾತನಾಡಿದ ನಗರಸಭೆ ಅಧ್ಯಕ್ಷ ಡಾ.ಎಚ್‌.ಎಸ್‌. ಅನಿಲ್‌ ಕುಮಾರ್, ‘ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ವಸ್ತು ಪ್ರದರ್ಶನವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜಿಸಲಾಗಿದೆ. ಮಕ್ಕಳು, ಹಿರಿಯರು ಒಂದು ಪ್ರದರ್ಶನಕ್ಕೆ ಭೇಟಿ ನೀಡಿ ಮನರಂಜನೆ ಪಡೆಯಬಹುದು. ವಿವಿಧ ವಸ್ತುಗಳ 80 ಮಳಿಗೆಗಳನ್ನು ತೆರೆಯಲಾಗಿದೆ’ ಎಂದು ಹೇಳಿದರು.

ನಗರಸಭೆ ಸದಸ್ಯ ಗೋಪಾಲ್‌ ಮಾತನಾಡಿ, ದನಗಳ ಜಾತ್ರೆ ಯಶಸ್ಸಿನ ಬಳಿಕ ರೈತರಿಗೆ ಕೃಷಿ ಕುರಿತು ಮಾಹಿತಿ ನೀಡಲು ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿದಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು. ನಾಲ್ಕು ಸಾವಿರ ಪಾಸ್‌ ವಿತರಿಸಲಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.