ಚನ್ನರಾಯಪಟ್ಟಣ: ಸಾಂಸ್ಕೃತಿಕ ಚಟುವಟಿಕೆಗಳು ನೆಲಮೂಲದ ಪರಂಪರೆಯನ್ನು ಬಿಂಬಿಸುತ್ತವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್. ಪುಟ್ಟಸ್ವಾಮಿಗೌಡ ಹೇಳಿದರು.
ಪಟ್ಟಣದಲ್ಲಿ ಸ್ನೇಹಬಳಗ, ಪುರಸಭೆಯ ಸಹಯೋಗದಲ್ಲಿ ಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಏರ್ಪಡಿಸಿದ್ದ ನಮ್ಮೂರ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಸಿ ಸೊಗಡಿನ ಕಲಾ ಪ್ರಕಾರಗಳನ್ನು ನೇಪಥ್ಯಕ್ಕೆ ಸರಿಯಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು.
ಪುರಸಭಾ ಅಧ್ಯಕ್ಷ ಕೆ.ಜೆ.ಸುರೇಶ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದ ಅನಾವರಣಕ್ಕೆ 8 ದಿನ ನಡೆಯುವ ನಮ್ಮೂರ ಹಬ್ಬ ವೇದಿಕೆಯಾಗಲಿದೆ. ಎಂದು ಅವರು ಹೇಳಿದರು.
ಮಾಜಿ ಅಧ್ಯಕ್ಷ ಸಿ.ಜೆ.ನಟರಾಜ್ ಮಾತನಾಡಿ, ದನಗಳ ಜಾತ್ರೆಯಲ್ಲಿ ರಾಸುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಪುರಸಭೆಯ ಮುಖ್ಯಾಧಿಕಾರಿ ಸಿ.ಎಸ್.ಬಸವರಾಜು ಮಾತನಾಡಿದರು. ಉಪಾಧ್ಯಕ್ಷೆ ಕಲ್ಪನಾ ಸುರೇಶ್, ಸದಸ್ಯರಾದ ಸಿ.ಎಸ್.ಪ್ರಕಾಶ್, ಮಂಜುನಾಥ್, ರಂಗಸ್ವಾಮಿ ಇದ್ದರು. ಪರಿಸರವಾದಿ ಸಿ.ಎನ್.ಅಶೋಕ್ ಸ್ವಾಗತಿಸಿದರು.
ಫೆ.15ರಂದು 10 ವರ್ಷದೊಳಗಿನ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ನಾಟ್ಯ ನಿನಾದ ಕಲಾತಂಡದಿಂದ ನೃತ್ಯ ಪ್ರದರ್ಶನ. ಫೆ.16ಕ್ಕೆ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಬುಗುರಿ, ಸ್ಕಿಪಿಂಗ್, ಹಗ್ಗಜಗ್ಗಾಟ, ಹೂವು ಕಟ್ಟುವ ಸ್ಪರ್ಧೆ. ಫೆ.17ರಂದು ಕಲಾವಿದೆ ಸುಧಾ ಬರಗೂರು ಅವರಿಂದ ನಗೆಹಬ್ಬ. ಫೆ.18ರಂದು ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ. ಫೆ. 19ರಂದು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್ ಓಟ, ರಂಗೋಲಿ ಸ್ಪರ್ಧೆ, ಜಾನಪದ ಜಾತ್ರೆ. ಫೆ. 20ರಂದು ಚಿತ್ರ ನಟ, ನಟಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.