ADVERTISEMENT

ತರಕಾರಿ ಮಾರಾಟ ಜೋರು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 7:38 IST
Last Updated 25 ನವೆಂಬರ್ 2017, 7:38 IST

ಹೊಳೆನರಸೀಪುರ: ಷಷ್ಠಿ ಹಬ್ಬದ ದಿನವಾದ ಶುಕ್ರವಾರ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಈ ದಿನ ಹಲವು ಬಗೆಯ ತರಕಾರಿಗಳನ್ನು ಹಂಚಿದರೆ ಒಳ್ಳೆಯದು ಎನ್ನುವ ನಂಬಿಕೆಯಿಂದಾಗಿ ಜನರು ವಿವಿಧ ಬಗೆಯ ತರಕಾರಿ ಕೊಳ್ಳಲು ಮುಗಿ ಬಿದ್ದಿದ್ದರು.

ಕುಂಬಳಕಾಯಿ, ಬೂದುಕುಂಬಳ, ಹಲಸಿನ ಕಾಯಿ, ಪರಂಗಿಕಾಯಿ, ಹುಣಸೆಚೊಟ್ಟು, ಈರುಳ್ಳಿಹೂವು, ಮಾಗಿ ಕಾಯಿ, ಸೋರೇಕಾಯಿಗಳು ಮಾರುಕಟ್ಟೆಗೆ ಬಂದಿದ್ದವು. ವ್ಯಾಪಾರಸ್ಥರು ಅವಗಳನ್ನು ಕತ್ತರಿಸಿ ತುಂಡು ಲೆಕ್ಕದಲ್ಲಿ ಮಾರಾಟ ಮಾರಾಟ ಮಾಡುತ್ತಿದ್ದರು. ಕೆಲವು ಅಂಗಡಿಗಳಲ್ಲಿ 32 ಬಗೆಯ ತರಕಾರಿಗಳ ಒಂದು ತರಕಾರಿಗಳ ಬ್ಯಾಗ್‌ ಅನ್ನು ಇಟ್ಟು ₹ 120ರಂತೆ ಮಾರಾಟ ಮಾಡುತ್ತಿದ್ದರು.

‘ಈ ಬ್ಯಾಗ್‌ ಮಾಡಿದ್ದು ಒಳ್ಳೆಯದಾಯಿತು. ಇಲ್ಲದೆ ಇದ್ದಿದ್ದರೆ ದೊಡ್ಡ ಕುಂಬಳಕಾಯಿಯನ್ನೇ ತೆಗೆದುಕೊಳ್ಳಬೇಕಿತ್ತು. ತರಕಾರಿ ಪೀಸ್‌ಗಳಲ್ಲದೆ ಇಡಿಯಾಗಿ ಕೊಳ್ಳುವುದಾಗಿದ್ದರೆ ಎಲ್ಲ ತರಕಾರಿ ಕೊಳ್ಳಲು ಕನಿಷ್ಠ ₹ 500 ರಿಂದ 700 ಬೇಕಾಗುತ್ತಿತ್ತು’ ಎಂದು ಶ್ರೀನಿಧಿ ಪ್ರಿಂಟರ್ಸ್ ಮಾಲಿಕ ನರಸಿಂಹ ಶೆಟ್ಟಿ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಪುಟ್ಟಸೋಮಪ್ಪ ಅಭಿಪ್ರಾಯಪಟ್ಟರು.

ADVERTISEMENT

ತರಕಾರಿ ಮಾರುಕಟ್ಟೆಗೆ ತೊಗರಿಕಾಯಿ ಹೆಚ್ಚಾಗಿ ಬಂದು ₹ 60ರಿಂದ 30ಕ್ಕೆ ಕುಸಿಯಿತು. ಅವರೆಕಾಯಿ ಕಡಿಮೆ ಬಂದಿದ್ದರಿಂದ ಬೆಲೆ ₹ 60ಕ್ಕೆ ಏರಿತ್ತು. ಕೆಲವರು ತರಕಾರಿ ಜತೆಗೆ ಸೊಪ್ಪನ್ನೂ ಖರೀದಿಸಿದ ಕಾರಣ ಸೊಪ್ಪಿನ ಬೆಲೆಯೂ ಹೆಚ್ಚಿತ್ತು. ಪಟ್ಟಣದ ಕೆಲವು ಬಡಾವಣೆಗಳಲ್ಲಿ ಯುವತಿಯರು ಮನೆ ಮನೆಗೆ ತರಕಾರಿ ಹಂಚುತ್ತಿದ್ದರು. ಹೂವು ಹಣ್ಣಿನ ವ್ಯಾಪಾರವೂ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.