ADVERTISEMENT

ದುಶ್ಚಟಗಳ ಜಾಲದಲ್ಲಿ ಬುದ್ಧಿವಂತರೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:13 IST
Last Updated 11 ಜುಲೈ 2017, 11:13 IST

ಹಾಸನ: ‘ಶ್ರೀಮಂತರು ಮತ್ತು ಬುದ್ಧಿವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೃಷ್ಣಮೂರ್ತಿ ಬಿ.ಸಂಗಣ್ಣ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಆಶ್ರಯದಲ್ಲಿ ಈಚೆಗೆ ಜಿಲ್ಲಾ ಕಾರಾಗೃಹದಲ್ಲಿ  ಹಮ್ಮಿಕೊಂಡಿದ್ದ   ‘ಮಾದಕ ವಸ್ತುಗಳ ನಿಷೇಧ ಕುರಿತು ಕಾನೂನು ಅರಿವು’  ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ‘ಮಾದಕ ವಸ್ತುಗಳು ಎಂದರೆ ಮದ್ಯಪಾನ ಒಂದೆ ಅಲ್ಲ.  ಡ್ರಗ್ಸ್, ಸಿಗರೇಟ್ ಸೇರಿದಂತೆ ನಾನಾ ವ್ಯಸನಗಳು ಈ ವ್ಯಾಪ್ತಿಗೆ ಸೇರುತ್ತವೆ. ಅವುಗಳಿಂದ ಸಾರ್ವಜನಿಕರು ದೂರ ಇರಬೇಕು’ ಎಂದು ಸಲಹೆ ನೀಡಿದರು. 

ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಆರ್ಥಿಕ ಸ್ಥಿತಿವಂತರು ಗಾಂಜ ಹಾಗೂ ಇತರೆ ಮಾದಕ ವಸ್ತುಗಳನ್ನು ಬಳಸುತ್ತಾರೆ.  ವಿದ್ಯಾವಂತರು, ಬುದ್ಧಿವಂತರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಮನಶಾಂತಿ ಹಾಳಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ದುಶ್ಚಟಗಳ ದಾಸರಾದವರಿಗೆ ಹಿರಿಯರು ತಿಳಿ ಹೇಳಬೇಕು. ಜಾಗೃತಿ ಮೂಲಕ ಅರಿವು ಮೂಡಿಸಿ ಉತ್ತಮ ಸಮಾಜ ಕಟ್ಟುವ ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು. 

ADVERTISEMENT

ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ಲಕ್ಷ್ಮೀನಾರಾಯಣ್ ಮಾತನಾಡಿ,  ಪೋಷಕರು ಮಕ್ಕಳ ಚಲನವಲನ ಬಗ್ಗೆ ನಿಗಾ ವಹಿಸಬೇಕು. ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ಬೆಳೆಸಬೇಕು. ಕಾರಾಗೃಹದಲ್ಲಿ  15 ದಿನಗಳಿಂದ ಮನಪರಿವರ್ತನೆ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಕೆಲಸ ಎಂದರು.

ಮಹಿಳಾ ಕೈದಿಗಳಿಂದ ‘ಸಂಸಾರ’ ಕಿರು ನಾಟಕ ಪ್ರದರ್ಶಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸುವರ್ಣಾ ಕೆ.ಮಿರ್ಜಾ, ವಕೀಲರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಸತೀಶ್ ಕಟ್ಟಾಯ, ಪ್ಯಾನಲ್ ವಕೀಲ ಜಿ.ಟಿ.ಮಂಜುನಾಥ್, ಎಸ್.ಆರ್.ಮನು,  ಕಾರಾಗೃಹದ ಅಧೀಕ್ಷಕ ಓಬಳೇಶಪ್ಪ, ಗಾಯತ್ರಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.