ADVERTISEMENT

ನಗರ ಪ್ರದೇಶಕ್ಕೆ ಕೃಷಿಕರ ವಲಸೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 6:01 IST
Last Updated 29 ಏಪ್ರಿಲ್ 2017, 6:01 IST

ಹಾಸನ: ಪ್ರಸ್ತುತ ಕೃಷಿ ಭೂಮಿ ನಿವೇಶನಗಳಾಗಿ ಪರಿವರ್ತನೆಗೊಳ್ಳುತ್ತಿದ್ದು,  ಗ್ರಾಮೀಣ ಜನರು ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು    ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ಪ್ರಾಧ್ಯಾಪಕ ಕೆ.ಬಿ.ರಂಗಪ್ಪ ಹೇಳಿದರು.ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೈಹಿಕ ಶ್ರಮ ಹಾಕಲು ಜನರು ತಯಾರಿಲ್ಲ. ತಂತ್ರಜ್ಞಾನ ಮುಂದುವರಿದಂತೆ ಬಹುಬೇಗ ಕೈಗೆಟುಕುವ ಕೆಲಸಗಳನ್ನು ಹುಡುಕಿ ಹೋಗುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೆರೆ, ಹೊಂಡಗಳು ಕಣ್ಮರೆಯಾಗುತ್ತಿವೆ.  ಬೇಸಾಯದಿಂದ ಬೇಸತ್ತ ರೈತ ಸಮೂಹ ಅತ್ಮಹತ್ಯೆಯತ್ತ ಶರಣಾಗುತ್ತಿರುವುದನ್ನು ನೋಡುತ್ತಿದ್ದೇವೆ’ ಎಂದು ತಿಳಿಸಿದರು.

ಮಂಡ್ಯ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ವಿ.ವಿ.ಜಗದೀಶ್, ‘ಇಂದಿನ ಯುವ ಪೀಳಿಗೆ  ಹಳೆ ಬೇಸಾಯ ಮಾದರಿ ಅನುಸರಿಸುತ್ತಿದ್ದಾರೆ. ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಾದರೆ ವಾತಾವರಣಕ್ಕೆ ತಕ್ಕಂತೆ ಕೃಷಿ ಮಾಡಲು ಮುಂದಾಗಬೇಕು. ಕೃಷಿಯ ಭಾಗಗಳಲ್ಲಿ ಒಂದಾದ ಅಣಬೆ ಬೇಸಾಯ, ಹೈನುಗಾರಿಕೆ, ಕುರಿ-ಕೋಳಿ ಸಾಕಾಣಿಕೆಯಲ್ಲಿ ತೊಡಗಿ ಆದಾಯ ಪಡೆಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ.ಜಿ.ಕೃಷ್ಣೇಗೌಡ, ‘ಸಮಾಜದಲ್ಲಿ ಪ್ರತಿ ಕ್ಷೇತ್ರಕ್ಕೂ ಪ್ರಾಮುಖ್ಯತೆ ಇದೆ. ಯಾವುದೇ  ವಿಷಯ ಕುರಿತು ತಿಳಿದುಕೊಳ್ಳಬೇಕಾದರೆ ಕೇವಲ ಪುಸ್ತಕ ಓದಿದರೆ ಸಾಲದು, ಅನುಭವಕ್ಕೆ ಬಂದಾಗಲೇ ಅದರ ಮಹತ್ವ ಗೊತ್ತಾಗುವುದು’ ಎಂದರು.

ಅಧ್ಯಾಪಕರಾದ ದೇವಕುಮಾರಿ, ರತ್ನ, ರಂಗಸ್ವಾಮಿ, ಮನ್ಸೂರ್‌ಪಾಷ, ರಶ್ಮಿ ಎ.ವಿ., ಲಕ್ಷ್ಮಣ್, ಸೋಮಶೇಖರ ದೇಸಾಯಿ, ಉದಯಕುಮಾರ್  ಭಾಗವಹಿಸಿದ್ದರು.
ಹೊಳೆನರಸೀಪುರ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ. ಲಲಿತಾದೇವಿ ಸಮಾರೋಪ ಭಾಷಣ ಮಾಡಿದರು. ಅಧ್ಯಾಪಕರಾದ ಶಿವರಾಜು, ಎಂ.ಸಿ.ಗಿರೀಶ್, ಕೆ.ಎಸ್. ಚಂದ್ರಕಲಾ, ಜೆ.ದೇವಕುಮಾರಿ, ಕೆ.ಜಿ.ಸುರೇಶ್‌ಕುಮಾರ್‌, ಪುಟ್ಟರಾಜು, ವೈ.ಪಿ.ಮಲ್ಲೇಗೌಡ, ಎ.ಆನಂದ್, ಎಂ. ಉದಯಕುಮಾರ್, ಡಾ.ಪುಟ್ಟರಾಜು, ಕೆ.ಡಿ.ಮುರಳೀಧರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.