ಹಾಸನ: ‘ಪದ್ಮಾವತಿ’ ಚಿತ್ರ ವೀಕ್ಷಣೆ ಮಾಡದೆ ವಿರೋಧಿಸುವುದು ಮತ್ತು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಹೇಳಿದರು. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಚಿತ್ರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಅನ್ಯಾಯ ಮತ್ತು ಅವಮಾನವಾಗಿದೆ ಎಂಬ ಆರೋಪ ಸಲ್ಲದು. ಪುಸ್ತಕ ಓದದೆ, ಚಿತ್ರ ವೀಕ್ಷಣೆ ಮಾಡದೆ ಈ ರೀತಿ ವರ್ತಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು. ನಾನು ಸಹ ಚಿತ್ರ ವೀಕ್ಷಿಸಿಲ್ಲ. ಯಾರೂ ಚಿತ್ರ ನೋಡದಿದ್ದರೂ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರತಿ ಸಿನಿಮಾ ಒಂದು ಸಮುದಾಯ ಮತ್ತು ವ್ಯಕ್ತಿಯ ಹಿನ್ನಲೆ ಹೊಂದಿರುತ್ತದೆ. ನಾಳೆ ಪುರಾಣ ಸರಿಯಲ್ಲ ಎನ್ನುತ್ತಾರೆ. ಅದಕ್ಕೂ ಇದೇ ರೀತಿ ವಿರೋಧ ವ್ಯಕ್ತಪಡಿಸುತ್ತಾರೆಯೇ’ ಎಂದು ಪ್ರಶ್ನಿಸಿದ ಅವರು, ‘ಚಿತ್ರ ಬಿಡುಗಡೆ ಮುನ್ನವೇ ಸೆನ್ಸಾರ್ ಮಂಡಳಿ ಮೇಲೆ ಒತ್ತಡ ಹೇರಿದ್ದು ತಪ್ಪು. ಇದೇ ರೀತಿ ಮುಂದುವರಿದರೆ ನಿರ್ದೇಶಕರಿಂದ ಸೃಜನಾತ್ಮಕ ಚಿತ್ರಗಳು ಹೊರಬರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಗೋವಾ ಚಿತ್ರೋತ್ಸವದಲ್ಲಿ ಎಸ್.ದುರ್ಗಾ ಮತ್ತು ನ್ಯೂಡ್ ಚಿತ್ರಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ್ದು ಸರಿಯಲ್ಲ. ಸಮಿತಿ ಆಯ್ಕೆ ಮಾಡಿದ ಚಿತ್ರಗಳನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.