ಸಕಲೇಶಪುರ: ಪುರಸಭೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸೂಪರ್ಸೀಡ್ ಮಾಡಿ, ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ವಕೀಲರಾದ ಪ್ರದೀಪ್ ಮತ್ತು ಮಹಮ್ಮದ್ ಶಫಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಪುರಸಭೆಯ ಖಜಾನೆಯಲ್ಲಿರುವ ಹಣವನ್ನು ಮುಖ್ಯಾಧಿಕಾರಿಯೂ ಸೇರಿದಂತೆ ಆಡಳಿತ ನಡೆಸುತ್ತಿರುವವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿರುವ ಅವರು, ಪುರಸಭೆ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಸೂಪರ್ಸೀಡ್ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ಕೂಡಲೇ ಅಮಾನತುಗೊಳಿಸಿ ಅವರ ಅವಧಿಯಲ್ಲಿ ನಡೆದಿರುವ ಎಲ್ಲ ಕಾಮಗಾರಿ ಹಾಗೂಕಡತಗಳ ಸಮಗ್ರ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಸ್ಥಳೀಯರೊಬ್ಬರು ಮೂರು ವರ್ಷಗಳ ಹಿಂದೆ ಹಸಿ ಮೀನು ಮಾರಾಟದ ಹರಾಜಿನಲ್ಲಿ ಭಾಗವಹಿಸಲು ₹ 52 ಸಾವಿರ ಪುರಸಭೆ ಮುಖ್ಯಾಧಿಕಾರಿ ಹೆಸರಿನಲ್ಲಿ ಠೇವಣಿ ಇಟ್ಟಿದ್ದರು. ಹರಾಜು ರದ್ದುಗೊಂಡ ಕಾರಣಕ್ಕೆ ಠೇವಣಿ ಣವನ್ನು ವಾಪಸ್ ನೀಡುವಂತೆ ಮನವಿ ಮಾಡಿದ್ದರು. ಆದರೆ, ಮುಖ್ಯಾಧಿಕಾರಿ 3 ವರ್ಷ ಸತಾಯಿಸಿ, ಕಳೆದ ತಿಂಗಳು ಪುರಸಭೆಯಿಂದ ಬ್ಯಾಂಕ್ ಚೆಕ್ ನೀಡಲಾಗಿತ್ತು. ಆದರೆ ಪುರಸಭೆ ಖಾತೆಯಲ್ಲಿ ಹಣವಿಲ್ಲದೆ ಕಾರ್ಪೋರೇಷನ್ ಬ್ಯಾಂಕಿನ ಚೆಕ್ ಅಮಾನ್ಯಗೊಂಡಿದೆ. ಇದು ಪುರಸಭೆ ಆರ್ಥಿಕ ದಿವಾಳಿಗೆ ಸಾಕ್ಷಿ ಎಂದು ವಿವರಿಸಿದರು
2015–16 ರಲ್ಲಿ ₹ 3 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಹರಾಜುಗೊಂಡಿದ್ದ ಎರಡು ಹಸಿ ಮೀನು ಮಾರಾಟ ಮಳಿಗೆಗಳನ್ನು, ಯಾವುದೇ ಕಾರಣ ಇಲ್ಲದೆ ಹಾಗೂ ಸರ್ಕಾರದ ಪೂರ್ವಾನುಮತಿ ಇಲ್ಲದೆ ಬಿಡ್ಗಳನ್ನು ರದ್ದುಗೊಳಿಸಿ, ಪುನಃ ಅದೇ ಮಳಿಗೆಗಳನ್ನು ₹ 2 ಲಕ್ಷಕ್ಕೆ ಮರು ಹರಾಜು ಮಾಡಿ ಪುರಸಭೆಗೆ ನಷ್ಟ ಮಾಡಿದ್ದಾರೆ. 2016–17 ನೇ ಸಾಲಿನಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲೂ ಅಕ್ರಮ ನಡೆದಿದೆ. ಮುಖ್ಯಾಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.