ADVERTISEMENT

ಪುಷ್ಕರ ಸ್ನಾನ: ಗಂಗೆಗೆ 12 ಬಗೆಯ ಆರತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 8:49 IST
Last Updated 14 ಸೆಪ್ಟೆಂಬರ್ 2017, 8:49 IST
ರಾಮನಾಥಪುರದ ರಾಮೇಶ್ವರ ದೇವಾಲಯದ ಬಳಿ ಕಾವೇರಿನದಿಯಲ್ಲಿ ನಡೆಯುತ್ತಿರುವ ಪುಷ್ಕರದ ಗಂಗಾರತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಉದ್ಘಾಟಿಸಿ ಮಾತನಾಡಿದರು
ರಾಮನಾಥಪುರದ ರಾಮೇಶ್ವರ ದೇವಾಲಯದ ಬಳಿ ಕಾವೇರಿನದಿಯಲ್ಲಿ ನಡೆಯುತ್ತಿರುವ ಪುಷ್ಕರದ ಗಂಗಾರತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಉದ್ಘಾಟಿಸಿ ಮಾತನಾಡಿದರು   

ಕೊಣನೂರು: ರಾಮನಾಥಪುರದ ರಾಮೇಶ್ವರ ದೇವಾಲಯ ಬಳಿಯ ಕಾವೇರಿ ನದಿಯ ಪುಷ್ಕರಣಿಯಲ್ಲಿ ನಡೆಯುತ್ತಿರುವ ಪುಷ್ಕರ ಸ್ನಾನಾಚರಣೆಯ ಮೊದಲ ದಿನ ಮಂಗಳವಾರ ಸಂಜೆ ಗಂಗಾರತಿ ಕಾರ್ಯಕ್ರಮ ನಡೆಯಿತು. ಪುಷ್ಕರಣಿಯ ಬಳಿ ಮೆಟ್ಟಿಲುಗಳ ಮೇಲೆ ಕಾವೇರಿ ಮಾತೆಗೆ 12 ವಿಧದ ಆರತಿಗಳಾದ ಓಂ ಆರತಿ, ಹಂಸಾರತಿ, ಗರುಡಾರತಿ, ಬ್ರಹ್ಮಾರತಿ, ಸಿಂಹಾರತಿ, ಸೂರ್ಯಾರತಿ, ಕುಂಭಾರತಿ, ನವಗ್ರಹಾರತಿ, ಪಂಚಾರತಿ, ನಾಗಾರತಿ, ಚಂದ್ರಾರತಿ, ನಂದಿ ಆರತಿಗಳನ್ನು ನೆರವೇರಿಸಿ ಕೊನೆಯದಾಗಿ ನಕ್ಷತ್ರಾರತಿ ಮಾಡಿದ್ದು ಜನರನ್ನು ಭಕ್ತಿಪರವಶವನ್ನಾಗಿಸಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ‘12 ವರ್ಷಗಳಿಗೊಮ್ಮೆ ನಡೆಯುವ ಪುಷ್ಕರ ಸ್ನಾನಾಚರಣೆ ಕಾರ್ಯಕ್ರಮದಿಂದಾಗಿ ರಾಮನಾಥಪುರ ಇತಿಹಾಸ ಪುಟಕ್ಕೆ ಸೇರಿದಂತಾಗಿದೆ. ಉತ್ತರ ಭಾರತದಲ್ಲಿ ಪುಷ್ಕರವು ಪ್ರಖ್ಯಾತಿಹೊಂದಿದ್ದು, ಈ ಭಾಗದ ಜನತೆಗೆ ಹೊಸ ವಿಷಯವಾಗಿದೆ.  ಪುಣ್ಯಕ್ಷೇತ್ರ, ದಕ್ಷಿಣಕಾಶಿ ರಾಮನಾಥಪುರ ಸ್ಥಳದ ಮಹತ್ವ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ’ ಎಂದು ಹೇಳಿದರು.

ಅರೇಮಾದನಹಳ್ಳಿ ಮಹಾಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ, ಅರಕಲಗೂಡು ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಆಚಾರ್ಯ ಗುರುಪ್ರಕಾಶ್ ಗುರೂಜಿ, ತಹಶೀಲ್ದಾರ್ ಪ್ರಸನ್ನಮೂರ್ತಿ, ಎಪಿಎಂಸಿ ಅಧ್ಯಕ್ಷ ಕಂಬೇಗೌಡ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ನಿರ್ದೇಶಕ ಕಬ್ಬಳಿಗೆರೆ ಭೈರೇಗೌಡ, ಹಾರಂಗಿ ಮಹಾಮಂಡಳದ ಅಧ್ಯಕ್ಷ ಎಸ್.ಸಿ. ಚೌಡೇಗೌಡ, ಗ್ರಾ.ಪಂ ಅಧ್ಯಕ್ಷ ಯೋಗೇಶ್ ಉಪಸ್ಥಿತರಿದ್ದರು.

ADVERTISEMENT

ಅಪರೂಪದ ಗಂಗಾರತಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಸೇರಿದ್ದರು. ಪುಷ್ಕರ ಸ್ನಾನದ ಎರಡನೇ ದಿನವಾದ ಬುಧವಾರ ಬೆಳಿಗ್ಗೆ ರಾಮನಾಥಪುರದ ಕಾವೇರಿ ವನ್ಯ ಪುಷ್ಕರಣಿಯಲ್ಲಿ ನೂರಾರು ಜನರು ಸ್ನಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.