ಹಾಸನ: ವಚನ ಸಾಹಿತ್ಯ ಬಹುಮುಖಿ ಅಧ್ಯಯನದ ನೆಲೆಗಳು ಎಂಬ ಎರಡು ಸಂಪುಟಗಳು ವಚನ ಸಾಹಿತ್ಯ ಸಂಶೋಧನೆಗೆ ಅಧ್ಯಯನ ಸಾಮಗ್ರಿಯನ್ನು ಒದಗಿಸುತ್ತದೆ ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಿ.ಶ್ರೀನಿವಾಸ್ ಹೇಳಿದರು.
ನಗರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ್, ರೆಡ್ ಕ್ರಾಸ್ ವೇದಿಕೆಗಳ ಸಮಾರೋಪ ಸಮಾರಂಭ ಮತ್ತು ವಚನ ಸಾಹಿತ್ಯ ಬಹುಮುಖಿ ಅಧ್ಯಯನದ ನೆಲೆಗಳು ಸಂಪುಟ-1 ಮತ್ತು 2 ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪುಸ್ತಕ ಪ್ರಕಟಣೆಗೆ ಇಡೀ ಕಾಲೇಜಿನ ಎಲ್ಲಾ ಅಧ್ಯಾಪಕರು ವಿದ್ಯಾರ್ಥಿಗಳು ಟೊಂಕ ಕಟ್ಟಿ ನಿಂತದ್ದು ಸಾರ್ಥಕ ಕೆಲಸವೆಂದು ಸ್ಮರಿಸಿದ ಅವರು, ಈ ಕೃತಿಗಳ ಸಂಪಾದಕರಾದ ಎನ್.ಸಿ. ರವಿ ಅವರ ಕೆಲಸ ಶಬ್ಧದೊಳಿಗಿನ ನಿಶಬ್ಧದಂತೆ ಎಂದು ಶ್ಲಾಘಿಸಿದರು.
ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರಶಾಂತ್ ಎಸ್.ಭಟ್ ಮಾತನಾಡಿ, ಕಾಲೇಜಿಗೆ ಕೀರ್ತಿ ಲಭಿಸುವುದು ವಿದ್ಯಾರ್ಥಿಗಳ ಸಾಧನೆಯಿಂದ. ಆ ನಿಟ್ಟಿನಲ್ಲಿ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಂಡು ಕಾಲೇಜಿಗೆ ಕೀರ್ತಿ ತರಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಾಂಶುಪಾಲ ಪ್ರೊ.ಶಿವಣ್ಣಗೌಡ ಮಾತನಾಡಿ, ಬಿಡುಗಡೆಗೊಂಡ ಎರಡು ಸಂಪುಟಗಳು ಸಾಹಿತ್ಯದ ಅಭ್ಯಾಸಿಗಳಿಗೆ ದಾರಿದೀಪವಾಗಿವೆ. ವಚನಗಳಲ್ಲಿರುವ ಮೌಲ್ಯವನ್ನು ಬದುಕಿಗೆ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಎನ್.ಸಿ. ರವಿ, ವಿಜಯ ಯು.ಪಾಟೀಲ್, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಎನ್. ಸುರೇಖಾ, ಪ್ರೊ. ಸತೀಶ್, ಎ.ಎಂ.ಚಂದ್ರ, ಇಂಗ್ಲಿಷ್ ಪ್ರಾಧ್ಯಾಪಕ ಕೆ.ಟಿ.ಕೃಷ್ಣೇಗೌಡ, ಎನ್. ಬಸವರಾಜ್, ಎಚ್.ಎಂ. ಶಿವಮೂರ್ತಿ, ಡಿ.ಪುಟ್ಟರತ್ನಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.