ಹಾಸನ: ಪ್ರತಿಯೊಬ್ಬರೂ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದು ಶಾಸಕ ಎಚ್.ಎಸ್.ಪ್ರಕಾಶ್ ಹೇಳಿದರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಕೊರತೆ ಹಾಗೂ ಇತರೆ ಕಾರಣಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಶಾಲೆ, ಕಾಲೇಜುಗಳನ್ನು ಮುಚ್ಚಲಾಗುತ್ತಿದ್ದು, ಅದನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಚರ್ಚಾ ಗೋಷ್ಠಿಗಳು ನಡೆಯಬೇಕು. ಸರ್ಕಾರ ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತಿರುವ ಹಣವನ್ನು ಸದುಪಯೋಗ ಪಡಿಸಿಕೊಳ್ಳ ಬೇಕು. ಅಂಗನವಾಡಿ ಮಟ್ಟದಿಂದ ಶಿಕ್ಷಣಕ್ಕೆ ತಳಹದಿ ಹಾಕಲಾಗುತ್ತಿದೆ. ಉನ್ನತ ಶಿಕ್ಷಣದವರೆಗೂ ಅಭಿವೃದ್ಧಿ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳನ್ನು ಉಳಿಸಿ, ಬೆಳೆಸಬೇಕು’ ಎಂದರು.
ವರ್ಷದ ಪುರಸ್ಕೃತ ವ್ಯಕ್ತಿಯಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಅಮ್ಜದ್ ಖಾನ್, ಪ್ರತಿಯೊಬ್ಬರು ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದಿನ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು’ ಎಂದು ಅವರು ಹೇಳಿದರು.
ಎವಿಕೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಎಚ್.ಎಲ್.ಮಲ್ಲೇಶಗೌಡ, ಪ್ರಸ್ತುತ ದಿನಗಳಲ್ಲಿ ಪಾಶ್ಚಿಮಾತ್ಯರ ಆಚಾರ, ವಿಚಾರಗಳಿಗೆ ಮೊರೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ತಡೆಗಟ್ಟ ಬೇಕಾದಲ್ಲಿ ಶಾಲಾ-ಕಾಲೇಜುಗಳಲ್ಲಿ ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಡೀನ್ ಹಂಪನಹಳ್ಳಿ ತಿಮ್ಮೇಗೌಡ, ಸಾಂಸ್ಕೃತಿಕ ವೇದಿಕೆ ಸಂಚಾಲಕ ರಾಘವೇಂದ್ರ ಹಾಜರಿದ್ದರು. ಕ್ರೀಡಾಧಿಕಾರಿ ಮಹೇಂದ್ರ ಕುಮಾರ್, ಎನ್ಎಸ್ಎಸ್ ಘಟಕಾಧಿಕಾರಿಗಳಾದ ಸಿ.ಆರ್.ನಿಂಗರಾಜು, ಕೆ.ಎನ್.ರಮೇಶ್, ಲೆಫ್ಟಿನೆಂಟ್ ಎಂ.ಸಿ.ಗಿರೀಶ್, ಸ್ಕೌಟ್ಸ್, ಗೈಡ್ಸ್ನ ಚನ್ನಯ್ಯ, ಚಂದ್ರಕಲಾ, ರೆಡ್ಕ್ರಾಸ್ ಘಟಕಾಧಿಕಾರಿ ಎಚ್.ಡಿ. ಆನಂದಸ್ವಾಮಿ, ಅಧ್ಯಾಪಕರಾದ ಸೋಮಶೇಖರ ದೇಸಾಯಿ, ಚಂದ್ರೇಗೌಡ, ವೈ.ಪಿ.ಮಲ್ಲೇಗೌಡ, ಎ.ವಿ.ರಶ್ಮಿ, ಪುಟ್ಟರಾಜು, ವಿದ್ಯಾ, ಪದ್ಮಾವತಿ, ಮನ್ಸೂರ್ ಪಾಷಾ, ಸುನೀತಾ, ವನಿತಾ, ರತ್ನ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.