ಹಾಸನ: ಹೊಳೆನರಸೀಪುರ ತಾಲ್ಲೂಕಿನ ಹರಿಹರಪುರದಲ್ಲಿ ಮಾರ್ಚ್ 24 ಹಾಗೂ 25 ರಂದು ನಡೆಯುವ ಉಡಸಲಮ್ಮ ಜಾತ್ರೆಯಲ್ಲಿ ದಲಿತರ ಮೇಲೆ ನಡೆಸುವ ಸಿಡಿ ಪದ್ಧತಿ ತಡೆಯಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ದಲಿತ ಮುಖಂಡ ನಾರಾಯಣ್ದಾಸ್ ಆಗ್ರಹಿಸಿದರು.
ಹಳೇಕೋಟೆ ಹೋಬಳಿ ವ್ಯಾಪ್ತಿಯ 7 ಹಳ್ಳಿಗಳು ಸೇರಿ ಉಡಸಲಮ್ಮ ಜಾತ್ರೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಚಾಕೇನಹಳ್ಳಿಯ ದಲಿತರ ಬೆನ್ನಿಗೆ ಕಬ್ಬಿಣದ ಸಲಾಕೆ ಚುಚ್ಚಿ ದೊಡ್ಡಕಂಬಕ್ಕೆ ಏರಿಸಿ ಸಿಡಿ ಆಚರಿಸುವ ಪದ್ಧತಿ ರೂಢಿ ಯಲ್ಲಿದೆ. ಇಂತಹ ಅಮಾನವೀಯ ಆಚರಣೆ ಯನ್ನು ಜಿಲ್ಲಾಡಳಿತ ನಿಷೇಧಿಸಬೇಕು ಎಂದು ಗುರುವಾರ ಪ್ರತಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಸಾಂಪ್ರದಾಯದ ಜಾತ್ರೆ ಆಚರಣೆ ಮೂಢ ನಂಬಿಕೆಯ ಭಾಗವಾಗಿದೆ. ಸಿಡಿ ಪದ್ಧತಿ ಹಲವು ಸಾಮಾಜಿಕ ಕಟ್ಟು ಪಾಡುಗಳು ಹಾಗೂ ಮೂಢನಂಬಿಕೆಗೆ ಒಳಗಾಗಿ ದಲಿತ ಸಮುದಾಯ ಒತ್ತಡಕ್ಕೆ ಸಿಲುಕಿದೆ.
ಆಧುನಿಕ ಯುಗದಲ್ಲೂ ಇಂತಹ ಆಚರಣೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತೆ ಆಗಿದೆ. ಸಿಡಿ ಏರಿಸುವಾಗ ಅವರ ಬೆನ್ನಿಗೆ ಕಬ್ಬಿಣದ ಸಲಾಕೆ ಚುಚ್ಚಿ ದೊಡ್ಡಕಂಬಕ್ಕೆ ಏರಿಸಿ ತಿರುಗಿಸುತ್ತಾರೆ. ಮಹಿಳೆಯರ ಬಾಯಿಗೆ ಬೀಗ ಹಾಕುತ್ತಾರೆ.
ಸತತ ಒಂದು ವಾರ ಅನಿಷ್ಠ ಆಚರಣೆ ನಡೆಯಲಿದೆ. ಕಳೆದ ವರ್ಷ ಬೇಲೂರು ತಾಲ್ಲೂಕಿನ ಹೆಬ್ಬಾಳ ಜಾತ್ರೆಯಲ್ಲಿ ಕಂಬ ಮುರಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದರು ಎಂದರು.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವುದು ಸರ್ಕಾರದ ಮೇಲಿದೆ. ದಲಿತ ಹಕ್ಕುಗಳ ಸಮಿತಿ, ಡಿಎಚ್ಎಸ್ ವತಿಯಿಂದ ಮಾರ್ಚ್ 10ರಂದು ಸಿಡಿ ಆಚರಣೆ ನಿಷೇಧಿ ಸುವಂತೆ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಸಿಡಿ ಆಚರಣೆಗೆ ಅವಕಾಶ ನೀಡದಂತೆ ಭರವಸೆ ನೀಡಿದ್ದಾರೆ.
ಸಿಡಿ ಆಚರಣೆ ನಡೆದಲ್ಲಿ ಜಿಲ್ಲಾಡ ಳಿತವೇ ನೇರ ಹೊಣೆಯಾಗಲಿದ್ದು, ಇದರ ವಿರುದ್ಧ ದಲಿತ ಸಂಘಟನೆಗಳ ಆಶ್ರಯ ದಲ್ಲಿ ಬೃಹತ್ ಹೋರಾಟ ನಡೆಸ ಲಾಗುವುದು ಅವರು ಎಚ್ಚರಿಸಿದರು.
ದಲಿತ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮರಿಜೋಸೆಫ್, ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಎಂ.ಜಿ.ಪೃಥ್ವಿ, ಎಸ್.ಎಂ.ಮಲ್ಲಪ್ಪ, ಆರ್ಪಿಐ ಸತೀಶ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಜಿಲ್ಲಾ ಸಂಚಾಲಕ ಅಂಬುಗ ಮಲ್ಲೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.