ADVERTISEMENT

ಸಿರಿಧಾನ್ಯ ಖರೀದಿಗೆ ಮುಗಿಬಿದ್ದ ಜನ

ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ರೈತರು ಭಾಗಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:30 IST
Last Updated 31 ಡಿಸೆಂಬರ್ 2017, 10:30 IST

ಹಾಸನ: ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಸನ,ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕೃಷಿ ಇಲಾಖೆ ಹಾಗೂ ಹಾಸನ ಮತ್ತು ಕೊಡಗು ಜಿಲ್ಲಾ ಪ್ರಾಂತೀಯ ಸಹಕಾರ, ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿಯಮಿತ, ಕೃಷಿ ಸಂಬಂಧಿತ ಇಲಾಖೆಗಳ ಆಶ್ರಯದಲ್ಲಿ ಎರಡು ದಿನ ಏರ್ಪಡಿಸಿರುವ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಉದ್ಘಾಟಿಸಿ ಮಾತನಾಡಿದರು.

ಜನರು ಸಿರಿಧಾನ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಬೇಕು. ಆಗ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಹಿಂದೆ 30 ಕೋಟಿ ಜನಸಂಖ್ಯೆ ಇದ್ದತಂಹ ಸಂದರ್ಭದಲ್ಲೂ ಸಿರಿಧಾನ್ಯಗಳು ಬಳಕೆಯಲ್ಲಿದ್ದವು. ಜನಸಂಖ್ಯೆ ಹೆಚ್ಚಾದಂತೆ ಸಿರಿಧಾನ್ಯಗಳ ಬೆಳೆಯ ಪ್ರಮಾಣವು ಹೆಚ್ಚಾಗಲು ಸಾವಯವ ಕೃಷಿ ವಿಧಾನ ಅಳವಡಿಸಿಕೊಳ್ಳಬೇಕು. ಅವುಗಳ ಉಪಯೋಗ ಹೆಚ್ಚಾದಂತೆಲ್ಲಾ ಜನರ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಸಾವಯವ ಆಹಾರ ಪದಾರ್ಥಗಳನ್ನು ರೈತರು ನೇರವಾಗಿ ಗ್ರಾಹಕರಿಗೆ ತಲುಪಿಸಿದರೇ ಹೆಚ್ಚಿನ ಲಾಭ ಸಿಗುತ್ತದೆ. ಪೂರ್ವಿಕರ ಆಹಾರ ಪದ್ಧತಿ ಅನುಸರಿಸಿದರೆ ಆರೋಗ್ಯ ಕಾಪಾಡಿಕೊಳ್ಳ ಬಹುದು. ಮೇಳದಲ್ಲಿ ಹೆಣ್ಣು ಮಕ್ಕಳಿಗೆ ಆಹಾರ ತಯಾರಿಸುವ ವಿಧಾನ ಕುರಿತು ತರಬೇತಿ ನೀಡಬೇಕಾಗಿದೆ ಎಂದು ಸಲಹೆ ನೀಡಿದರು.

ರಾಸಯನಿಕ ಬಳಸದೆ ಬೆಳೆದಿದ್ದ ಹತ್ತಾರು ಬಗೆಯ ಹಣ್ಣು, ತರಕಾರಿ ಹಾಗೂ ಸಿರಿಧಾನ್ಯ ಖರೀದಿಗೆ ಜನ ಮುಗಿ ಬಿದ್ದಿದ್ದರು. ಮಳಿಗೆಗಳಿಗೆ ಭೇಟಿ ನೀಡಿ ಸಿರಿಧಾನ್ಯ ಹಾಗೂ ಇತರೆ ವಸ್ತುಗಳನ್ನು ವೀಕ್ಷಿಸಿದರು.

ವಸ್ತು ಪ್ರದರ್ಶನದಲ್ಲಿ ಕ್ಯಾಸಕ್ಕಿ, ರಾಜಮುಡಿ, ಘಂಸಾಲೆ, ಹೊಳೆಸಾಲು ಚಿಪ್ಪಿಗ, ಆಲೂರು ಸಣ್ಣ, ನೆಟ್ಟಿ ಬಿಳ್ಳಕ್ಕಿ, ದಪ್ಪಭತ್ತ, ಸಂಪಿಗೆ, ರತ್ನಚೂಡಿ ಸೇರಿದಂತೆ ವಿವಿಧ ಬಗೆಯ ಅಕ್ಕಿ, ಸಿರಿಧಾನ್ಯಗಳಾದ ಸಜ್ಜೆ, ನವಣೆ, ಕೊರಲೆ, ಹರಕ, ಸಾವೆ, ರಾಗಿ, ಜೋಳ, ಸಜ್ಜೆ, ಬರಗು. ತರಕಾರಿ ಹಣ್ಣು, ಜೇನು, ಹಸುವಿನ ಬೆಣ್ಣೆ, ಆಯುರ್ವೇದ ಔಷಧಿಯ ಗುಣವುಳ್ಳ ಸಸ್ಯಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಯಿತು.

ಸಾವಯವ ಮತ್ತು ಸಿರಿಧಾನ್ಯ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ರೈತರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ಶ್ವೇತಾ ದೇವರಾಜ್, ಕೃಷಿ ಜಂಟಿ ನಿರ್ದೇಶಕ ಟಿ. ರಾಮಚಂದ್ರಯ್ಯ, ಚಿಕ್ಕಮಗಳೂರು ಜಂಟಿ ಕೃಷಿ ನಿರ್ದೇಶಕಿ ಎಂ.ಸಿ. ಸೀತಾ, ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆ. ರಾಮಪ್ಪ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಪಿ. ಮೋಹನ್, ಹುಡಾ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್‌ಕುಮಾರ್, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಬಿ.ಟಿ ಸತೀಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.