ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಕೆ.ಜಿ. ₹ 80ಕ್ಕೆ ಮಾರಾಟ ಆಗುತ್ತಿದ್ದ ಕಿತ್ತಳೆ ಹಣ್ಣು, ಈ ವಾರ ₹ 60ಕ್ಕೆ ಇಳಿದಿದೆ. ಮಡಿಕೇರಿಯಿಂದ ಹಾಸನ ಮಾರುಕಟ್ಟೆಗೆ ಕಿತ್ತಳೆ ಹಣ್ಣು ಆಮದು ಆಗುತ್ತಿತ್ತು. ಪ್ರಸ್ತುತ ಹಣ್ಣಿನ ಕಾಲವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಬೆಲೆ ಇಳಿಕೆಯಾಗಿದೆ.
‘ಇದೇ ರೀತಿ ಮಾರುಕಟ್ಟೆಗೆ ಹೆಚ್ಚು ಹಣ್ಣು ಬಂದರೆ ದರದಲ್ಲಿ ಮತ್ತಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಬೇಡಿಕೆಗಿಂತ ಹೆಚ್ಚು ಹಣ್ಣು ಬರುತ್ತಿದೆ’ ಎಂದು ಹಣ್ಣಿನ ವ್ಯಾಪಾರಿ ಸಂಗಮೇಶ್ ಹೇಳಿದರು.
ಕಳೆದ ವಾರ ಕೆ.ಜಿ. ₹ 40 ಇದ್ದ ಅವರೆಕಾಯಿ, ಈ ವಾರ ₹ 30ಕ್ಕೆ ಮಾರಾಟವಾಗುತ್ತಿದೆ. ಹಾಸನದ ಮಾರುಕಟ್ಟೆಗೆ ಚನ್ನರಾಯಪಟ್ಟಣ, ಮೈಸೂರು, ಹಾಸನ ಸುತ್ತಮುತ್ತಲಿನ ಪ್ರದೇಶದಿಂದ ಅವರೆಕಾಯಿ ಹೆಚ್ಚು ಬರುತ್ತಿದ್ದು, ದರ ಕುಸಿದಿದೆ. ಇನ್ನು ₹ 10ಕ್ಕೆ ಒಂದೂವರೆ ಕೆ.ಜಿ. ಟೊಮೆಟೊ ಮಾರಾಟ
ವಾಗುತ್ತಿದ್ದು, ಬೆಲೆ ತುಸು ಏರಿಕೆಯಾಗಿದೆ. ಈರುಳ್ಳಿ ₹ 40ಕ್ಕೆ ಲಭ್ಯ ಇದ್ದು, ಯಾವುದೇ ವ್ಯತ್ಯಾಸವಾಗಿಲ್ಲ.
ಬೀನ್ಸ್ ಕೆ.ಜಿ.ಗೆ ₹ 40, ಆಲೂಗೆಡ್ಡೆ ₹ 20, ಕ್ಯಾರೆಟ್ ₹ 60, ಹಾಗಲಕಾಯಿ ₹ 40, ದಪ್ಪ ಮೆಣಸಿನ ಕಾಯಿ ₹ 60, ನುಗ್ಗೆಕಾಯಿ ₹ 100 ರಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ, ಪಾಲಾಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪು ಕಂತೆಗೆ ₹ 5 ರಂತೆ ಲಭ್ಯ ಇದೆ.
ಹಣ್ಣಿನ ದರದಲ್ಲೂ ಅಷ್ಟು ಏರಿಕೆಯಾಗಿಲ್ಲ. ಬಾಳೆಹಣ್ಣು ಕೆ.ಜಿ. ₹ 70, ಸೇಬು, ಸೀತಾಫಲ, ಸಪೋಟ, ಅನಾನಸ್, ದಾಳಿಂಬೆ ಕೆ.ಜಿ. ಗೆ ₹ 100, ಪಪ್ಪಾಯ, ಕಲ್ಲಂಗಡಿ ₹ 30ಕ್ಕೆ ಮಾರಾಟ ಮಾಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.