ಸವಣೂರ: ‘ಒಂದು ಊರಿಗೆ ಇತಿಹಾಸವಿದ್ದರೆ ಮಾತ್ರ ಅದಕ್ಕೆ ಭವ್ಯ ಮೆರಗು ಬರಲು ಸಾಧ್ಯ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಅಬ್ದುಲ್ಖಾನ್ ಸಂಶಿ ರಚಿತ ‘ನಮ್ಮ ಸವಣೂರ’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇತಿಹಾಸದ ಪುಟದಲ್ಲಿ ಸವಣೂರಿನ ಹೆಸರು ಅಚ್ಚಳಿಯದಂತೆ ಉಳಿಯಲು ಇಲ್ಲಿನ ಸತ್ಯಬೋಧಸ್ವಾಮಿ ಮಠ, ದೊಡ್ಡಹುಣಸೆ ಮರ, ನವಾಬರ ಪಾಳು ಬಂಗಲೆಗಳು, ವಿಳ್ಯದೆಲೆ ವಹಿವಾಟು, ಶಿವಲಾಲ್ ಖಾರಾ, ಡಾ.ವಿ. ಕೃ.ಗೋಕಾಕರ ಹುಟ್ಟು ಸೇರಿದಂತೆ ಹಲವು ವಿಷಯಗಳು ಪ್ರಮುಖವಾಗಿವೆ’ ಎಂದರು.
‘ಮನುಷ್ಯ ಹುಟ್ಟಿದ ಮೇಲೆ ಇತಿಹಾಸದ ಒಂದು ಭಾಗವಾಗಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕರು ಸವಣೂರಿನವರು ಎಂಬುದೇ ನಮ್ಮ ಹೆಮ್ಮೆ’ ಎಂದರು.
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಂಜುನಾಥ ಕುನ್ನೂರ, ಕಲ್ಮಠದ ಮಹಾಂತ ಸ್ವಾಮೀಜಿ, ಖಾಂಜಾದೆ ಹಾಗೂ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ವರ್ತಕ ಮೋಹನ ಮೆಣಸಿನಕಾಯಿ, ಪುರಸಭೆ ಅಧ್ಯಕ್ಷ ಖಲಂದರ್ ಅಹ್ಮದ್ ಅಕ್ಕೂರ, ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಅಕ್ಕನ ಬಳಗದ ಅಧ್ಯಕ್ಷೆ ಲೀಲಕ್ಕ ಗಾಣಗೇರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.