ಶಿಗ್ಗಾವಿ: ಪರಂಪರಾಗತವಾಗಿ ಆಚರಣೆ ಮಾಡುತ್ತಿರುವ ಹಬ್ಬ ಹರಿದಿನಗಳು ಸರ್ವ ಜನಾಂಗದಲ್ಲಿ ಒಗ್ಗಟ್ಟು, ಸಹಬಾಳ್ವೆ ಮೂಡಿಸುತ್ತಿವೆ. ಹೀಗಾಗಿ ಅವುಗಳನ್ನು ಇಂದಿಗೂ ಆಚರಿಸುತ್ತಾ ಬರಲಾಗಿದೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಪಿ.ಎ.ಸಂಜಯ್ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಮಂಜುನಾಥ ನಗರದಲ್ಲಿ ಮಂಜುನಾಥಸ್ವಾಮಿ ಟ್ಟಸ್ಟ್ ಕಮಿಟಿ ಆಶ್ರಯದಲ್ಲಿ ಕಾರ್ತೀಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಶನಿವಾರ ನಡೆದ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿವಶಂಕರಯ್ಯ ಮಹಾಂತಿನಮಠ ಸಾನಿಧ್ಯ ವಹಿಸಿದ್ದರು. ಮಂಜುನಾಥಸ್ವಾಮಿ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಾಲತೇಶ ಗೌಡರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಂಗಾಧರ ಗುಡಿಮನಿ, ಮಂಜುನಾಥ ಗುಡಿಮನಿ, ಶಿವಾನಂದ ಗೌಡರ, ಪುರಸಭೆ ಮುಖ್ಯಾಧಿಕಾರಿ ಎಚ್.ಎ.ಕುಮಾರ, ಸದಸ್ಯೆ ಸುನೀತಾ ಬೆಟಗೇರಿ, ಮಾತನೇಶ ನರಗುಂದ, ನಾಗಪ್ಪ ಬೆಟಗೇರಿ ಮತ್ತಿತರರು ಇದ್ದರು.
ದೇವಸ್ಥಾನದಲ್ಲಿ ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ, ದೀಪಾರಾಧನೆ ಹಾಗೂ ಮಂಜುನಾಥಸ್ವಾಮಿ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಇದೇ ವೇಳೆ ಸಮಿತಿ ವತಿಯಿಂದ ಸೇವಾಧಾರಿಗಳನ್ನು ಸನ್ಮಾನಿಸಲಾಯಿತು. ಭದ್ರಾವತಿ ಆರ್.ಹರೀಶ ಮತ್ತು ಕಲಾತಂಡದಿಂದ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮ ಜನಮನ ರಂಜಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.