ADVERTISEMENT

ಗಳಗನಾಥರ ಸಾಹಿತ್ಯ ಸೇವೆ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 8:15 IST
Last Updated 11 ಜನವರಿ 2017, 8:15 IST

ಹಾವೇರಿ: ‘ಹೊಸಗನ್ನಡ ಗದ್ಯದ ಆದ್ಯ ಪ್ರವರ್ತಕ, ಕನ್ನಡ ಕಾದಂಬರಿಗಳ ಪಿತಾಮಹ ಎಂದೇ ಹೆಸರಾಗಿದ್ದ ಗಳಗನಾಥರ ಸಾಹಿತ್ಯ ಸೇವೆ ಸ್ಮರಣೀಯ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಹೇಳಿದರು.

ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಆಶ್ರದಲ್ಲಿ ನಗರದ ಶಿವಲಿಂಗೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಗಳಗನಾಥರ ಜನ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಳಗನಾಥರು ನಮ್ಮ  ಜಿಲ್ಲೆಯ ಗಳಗನಾಥ ಎಂಬ ಚಿಕ್ಕ ಹಳ್ಳಿಯಲ್ಲಿ ಜನ್ಮತಾಳಿದ್ದು ಹೆಮ್ಮೆಯ ವಿಷಯ. ವರದಾ ಹಾಗೂ ತುಂಗಭದ್ರಾ ನದಿಯ ಸಂಗಮದಲ್ಲಿರುವ ಗಳಗೇಶ್ವರ ದೇವಾಲಯದಲ್ಲೇ ಇವರಿಗೆ ಗುರುಕುಲ ಶಿಕ್ಷಣ ದೊರೆತಿದೆ’ ಎಂದರು.

‘ಕನ್ನಡ ಸಾಹಿತ್ಯದ ಅರಣೋದಯ ಕಾಲದಲ್ಲಿ ಗಳಗನಾಥರ ಬರವಣಿಗೆ ಯಿಂದ ಅನೇಕ ಸಾಹಿತಿಗಳು ಪ್ರಭಾವಿತ ರಾಗಿದ್ದರು. ಕನ್ನಡ ದಯನೀಯ ಸ್ಥಿತಿಯಲ್ಲಿದ್ದಾಗ, ಮರಾಠಿ ಪ್ರಭಾವಕ್ಕೆ ಒಳಗಾಗಿದ್ದ ಧಾರವಾಡ ಶಿಕ್ಷಕರ ತರಬೇತಿ ಸಂಸ್ಥೆಯು ಗಳಗನಾಥರ ಬರವಣಿಗೆಗೆ ಪ್ರೇರಣೆಯಾಯಿತು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಡಾ.ಶ್ರೀಧರ ಹೆಗಡೆ ಭದ್ರನ್ ಹೇಳಿದರು.

ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ದುಷ್ಯಂತ ನಾಡಗೌಡ ಮಾತನಾಡಿ, ಗಳಗನಾಥರು ತಮ್ಮ ಸಾಲ ತೀರಿಸಲೆಂದೇ ಪುಸ್ತಕಗಳನ್ನು ಬರೆದು, ತಲೆ ಮೇಲೆ ಹೊತ್ತು ಮಾರಾಟ ಮಾಡಬೇಕಾದ ಅನಿವಾರ್ಯತೆ ಬಂದೊ ದಗಿತ್ತು. ಹೀಗಾಗಿ ಅವರನ್ನು ಆಧುನಿಕ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ’ ಎಂದರು.

ಶಿವಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಪಿ.ಡಿ.ಶಿರೂರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪ್ರೋತ್ಸಾಧನ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಹನುಮಂತಗೌಡ ಗೊಲ್ಲರ, ಪ್ರಾಚಾರ್ಯೆ ಡಾ.ಸವಿತಾ ಹಿರೇಮಠ, ವೆಂಕಟೇಶ ಗಳಗನಾಥ, ಪ್ರೊ.ಆರ್.ಕೆ. ಮುಳಗುಂದ, ಜೆ.ಕೆ.ಜಮಾದಾರ, ಎ.ಎಂ.ಮುಲ್ಲಾ, ಅಶ್ವಿನಿ ಗಳಗನಾಥ, ಪ್ರೊ.ಪುಷ್ಪಾ ಶೆಲವಡಿಮಠ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.