ADVERTISEMENT

ಗಾಂಧೀಜಿ ಶಿಷ್ಯನ ಕೂಸಿಗೆ 75ರ ಹರೆಯ

ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರ ಸಂಘ: ನಾಳೆ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 11:04 IST
Last Updated 18 ಫೆಬ್ರುವರಿ 2017, 11:04 IST
1966ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಸಂಘದ ಬೆಳ್ಳಿ ಹಬ್ಬ ಆಚರಣೆ ಮತ್ತು ಸೈನಿಕರಿಗಾಗಿ ಕಂಬಳಿ ತಯಾರು ಮಾಡುವ ಘಟಕವನ್ನು ಉದ್ಘಾಟನೆಗೆ ಬಂದ ಚಿತ್ರ
1966ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಸಂಘದ ಬೆಳ್ಳಿ ಹಬ್ಬ ಆಚರಣೆ ಮತ್ತು ಸೈನಿಕರಿಗಾಗಿ ಕಂಬಳಿ ತಯಾರು ಮಾಡುವ ಘಟಕವನ್ನು ಉದ್ಘಾಟನೆಗೆ ಬಂದ ಚಿತ್ರ   
ರಾಣೆಬೆನ್ನೂರು: ಮಹಾತ್ಮಾ ಗಾಂಧೀಜಿಯ ಶಿಷ್ಯಕೋಟಿಯಲ್ಲಿ ಒಬ್ಬರಾಗಿದ್ದ ಹಾವೇರಿ ಜಿಲ್ಲೆಯ ಸಂಗೂರಿನ ಕರಿಯಪ್ಪ ನೀಲಪ್ಪ ಯರೇಶೀಮಿ ಅವರ ನೇತೃತ್ವದಲ್ಲಿ ರಚನೆಯಾಗಿರುವ ಇಲ್ಲಿನ ಕುರುಬರ ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರಿ ಸಂಘ ಪ್ರಸಕ್ತ ವರ್ಷ ತನ್ನ ಸ್ಥಾಪನೆಯ 75ನೇ ವರ್ಷ ಆಚರಿಸುತ್ತಿದ್ದು ಇದೇ 19ರಂದು ಕಾರ್ಯಕ್ರಮ ನಡೆಯಲಿದೆ.
 
ಅಖಂಡ ಧಾರವಾಡ ಜಿಲ್ಲೆಯ (ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳು) ಉಣ್ಣೆ ನೇಕಾರರ, ಕುರಿಗಾರರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ನು ದೃಷ್ಟಿಕೋನವನ್ನು ಇಟ್ಟುಕೊಂಡು ಸ್ಥಾಪಿಸಲಾಗಿರುವ ಈ ಸಂಘ ಕುರಿಗಾರರ ಏಳಿಗೆಗೆ ಅವಿರತ ಶ್ರಮಿಸುತ್ತಿದೆ. ಕುರಿ ಸಾಕಾಣಿಕೆದಾರರಿಗೆ ಉಣ್ಣೆ ನೂಲುವ ಮಹಿಳೆಯರಿಗೆ, ಕಂಬಳಿ ನೇಯುವ ಪುರುಷ ಸದಸ್ಯರಿಗೆ ಉದ್ಯೋಗ ನೀಡಿ ಅವರ ಆರ್ಥಿಕ ಮಟ್ಟ ಸುಧಾರಿಸಲು ಸಹಾಯಕವಾಗಿದೆ.
 
ಸಂಘದಲ್ಲಿ ಒಟ್ಟು 4758 ಸದಸ್ಯರಿದ್ದಾರೆ. ಈ ಪೈಕಿ ಪುರುಷರು 3470, ಮಹಿಳೆಯರು 1288. ಕೈಮಗ್ಗ ಮತ್ತು ಜವಳಿ ಇಲಾಖೆಯ ಧನ ಸಹಾಯದಿಂದ 3 ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಕಟ್ಟಡಗಳನ್ನು ನಿರ್ಮಿಸಿದ್ದು, ಅದರಲ್ಲಿ 100 ಮಗ್ಗಗಳನ್ನು ಹಾಗೂ ಸಂಘದ ಸದಸ್ಯರ ಮನೆಗಳಲ್ಲಿ 280 ಮಗ್ಗಗಳನ್ನು ಅಳವಡಿಸಿಕೊಂಡು ನೇಯ್ಗೆ ಮತ್ತು ಉತ್ಪಾದನೆ ಮೂಲಕ ಒಟ್ಟು 1520 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.
 
1959ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರು ರಾಣೆಬೆನ್ನೂರಿನಲ್ಲಿ ಸಂಘದ ಮುಖ್ಯ ಕಚೇರಿಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರಯ. 1961ರಲ್ಲಿ ಕೇಂದ್ರ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರು ಉದ್ಘಾಟಿಸಿದ ಈ ಸಂಘದ ಬೆಳ್ಳಿ ಹಬ್ಬವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1966ರಲ್ಲಿ ಉದ್ಘಾಟಿಸಿದ್ದರು.
 
ಸಂಘದಿಂದ ಕೈಗೊಂಡ ವಿವಿಧ ಯೋಜನೆಗಳು: ಮೇಡ್ಲೇರಿಯ ಕಂಬಳಿ ಉತ್ಪಾದನಾ ಕೇಂದ್ರದ ಸದಸ್ಯರಿಗೆ 50 ಮನೆ ಮತ್ತು ಕಾರ್ಯಾಗಾರಗಳನ್ನು, ನಗರದ ಶಿದ್ದೇಶ್ವರ ನಗರದಲ್ಲಿ 8 ಎಕರೆ ಜಮೀನಿನಲ್ಲಿ 100 ಪ್ಲಾಟುಗಳನ್ನು ನಿರ್ಮಿಸಲಾಗಿದೆ.
 
ಕೈಮಗ್ಗ ಮತ್ತು ಜವಳಿ ಇಲಾಖೆಯ ಜನಪ್ರಿಯ ಯೋಜನೆಯಲ್ಲಿ ಒಂದಾದ ಜನಶ್ರೀ/ಬುನ್ಕಾರ್ ಬಿಮಾ ಯೋಜನೆಯಡಿ 543 ನೇಕಾರ ಫಲಾನುಭವಿಗಳ ಮಕ್ಕಳ ಶಿಕ್ಷಣಕ್ಕಾಗಿ ಶಿಷ್ಯ ವೇತನ, ನೇಕಾರರು ಮರಣ ಹೊಂದಿದ ವಾರಸುದಾರರಿಗೆ ವಿಮಾ ಮೊತ್ತವನ್ನು ಕೊಡಿಸಲಾಗಿದೆ.ಸಂಘದ 858 ಸದಸ್ಯರು ಯಶಸ್ವಿನಿ ಯೋಜನೆಯಡಿ ವಿವಿಧ ಚಿಕಿತ್ಸೆ ಪಡೆದಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಸಿದ್ದಪ್ಪ ಅಂಬಲಿ ವಿವರಿಸಿದರು.
 
ಮೇಡ್ಲೇರಿ, ರಾಹುತನಕಟ್ಟಿ, ಉದಗಟ್ಟಿ, ಸೋಮಲಾಪುರ, ಬೇಲೂರ, ಹೀಲದಹಳ್ಳಿಯಲ್ಲಿ ಉಣ್ಣೆಯ ಕಂಬಳಿ, ಟೊಪ್ಪಿಗೆ, ಚೆಂಡು ಇತರೆ ಉಣ್ಣೆಯ ವಸ್ತು ಉತ್ಪಾದನೆ ಘಕಟಗಳು ಮತ್ತು ನಗರದಲ್ಲಿ ಮಾರಾಟ ಮಳಿಗೆ ಹೊಂದಿದೆ. 
 
ಸಂಘವು ನೇಕಾರ ಸದಸ್ಯರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ, ಸರ್ಕಾರದಿಂದ ಬಂಡವಾಳವನ್ನು ಕ್ರೊಢೀಕರಿಸಿ ಯೋಜನೆಗಳನ್ನು ತಂದು ಕುರುಬರ ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಗೆ ಸಹಕಾರಿ ಸಂಘವು ಸಮಾಜದ ಜನರ ಜೀವನಾಡಿಯಾಗಿದೆ.
 
* ಕುರಿ ಪೋಷಣೆ, ನೇಕಾರರ ಹಿತಕಾಯುವುದು ಸಂಘದ ಮುಖ್ಯ ಉದ್ದೇಶವಾಗಿದೆ. ಸಂಘದಿಂದ ಉಣ್ಣೆ ಖರೀದಿಸಿ ಸದಸ್ಯರಿಂದ ಕಂಬಳಿ ತಯಾರಿಸಲಾಗುತ್ತಿದೆ
-ಕರಿಯಪ್ಪ ಪೂಜಾರ, ಸಂಘದ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.